ನವದೆಹಲಿ: ಮಹಾತ್ಮ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆಗೆ ಶೋಕಾಸ್ ನೋಟಿಸ್ ನೀಡಿದೆ. ಹೆಗ್ಡೆ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್ ಶೋಕಾಸ್ ನೋಟಿಸ್ ನೀಡಿದ್ದು ನಾಳಿನ ಸಂಸದೀಯ ಸಭೆಗೆ ಆಗಮಿಸದಂತೆ ತಾಕೀತು ಮಾಡಿದೆ.
ಇಂದು ಬೆಳಗ್ಗೆ ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ಬಿಜೆಪಿ ಹೈಕಮಾಂಡ್ ಮಾಧ್ಯಮಗಳ ಮೂಲಕ ಬೇಷರತ್ ಕ್ಷಮೆ ಕೇಳಲು ಸೂಚಿಸಿತ್ತು. ಅನಂತ ಕುಮಾರ್ ಕ್ಷಮೆಯಾಚಿಸದ ಹಿನ್ನೆಲೆ ಶೋಕಾಸ್ ನೋಟಿಸ್ ನೀಡಿದ್ದು, ಬಲು ಅಪರೂಪ ಎನ್ನುವಂತೆ ಸಂಸದೀಯ ಸಭೆಗೆ ನಿಷೇಧ ಹೇರಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅನಂತ್ ಕುಮಾರ್, ಬ್ರಿಟಿಷರ ಬೆಂಬಲದಿಂದ ನಡೆದ ಪೂರ್ವ ನಿಯೋಜಿತ ನಾಟಕದಲ್ಲಿ ಗಾಂಧಿ ಪಾತ್ರಧಾರಿಯಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಈ ನಾಯಕರನ್ನು ಪೊಲೀಸರು ಎಂದು ಮುಟ್ಟಿಲ್ಲ. ಬ್ರಿಟಿಷರ ಅನುಮತಿಯಿಂದ ಸತ್ಯಾಗ್ರಹ, ಪ್ರತಿಭಟನೆ ನಾಟಕ ನಡೆಸಲಾಗಿತ್ತು. ಇದು ನಿಜವಾದ ಸ್ವಾತಂತ್ರ್ಯ ಹೋರಾಟವೇ ಅಲ್ಲ, ಅನುಕೂಲ ಸ್ವಾತಂತ್ರ್ಯ ಚಳುವಳಿ ಎಂದು ಗಾಂಧಿಯನ್ನು ಟೀಕಿಸಿದ್ದರು.
ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಗಾಂಧಿ ಅವರು ನಡೆಸಿದ ಅಮರಣಾಂತ ಉಪವಾಸ ಸತ್ಯಾಗ್ರಹವೇ ಕಾರಣ ಎಂದು ಬಿಂಬಿಸಲಾಗಿದೆ. ಆದರೆ ಇದು ನಿಜವಲ್ಲ ಸತ್ಯಾಗ್ರಹದಿಂದ ಬ್ರಿಟಿಷರು ಭಾರತವನ್ನು ತೊರೆಯಲಿಲ್ಲ. ಭಾರತದ ಇತಿಹಾಸ ಓದಿದರೆ ನನ್ನ ರಕ್ತಕುದಿಯುತ್ತದೆ. ಇಂಥವರನ್ನು ಹೇಗೆ ಮಹಾತ್ಮ ಎಂದು ಕರೆಯಲಾಗುತ್ತದೆ ಎಂದು ತಮ್ಮ ಭಾಷಣದಲ್ಲಿ ಮಹಾತ್ಮಗಾಂಧಿ ವಿರುದ್ಧ ಅನಂತಕುಮಾರ್ ವಾಗ್ದಾಳಿ ನಡೆಸಿದ್ದರು.
ಅನಂತಕುಮಾರ್ ಹೆಗ್ಡೆ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಜೆಡಿಎಸ್ ವಲಯದಲ್ಲಿ ತೀವ್ರ ಟೀಕೆಗೆ ಗ್ರಾಸವಾಗಿತ್ತು. ಸ್ವಪಕ್ಷಿಯರಿಂದಲೇ ಅಸಮಾಧಾನಕ್ಕೆ ಕಾರಣವಾಗಿದ್ದ ಈ ಹೇಳಿಕೆ ಬಿಜೆಪಿಗೆ ರಾಷ್ಟ್ರ ಮಟ್ಟದಲ್ಲಿ ಮುಜುಗರ ತಂದಿಟ್ಟಿತ್ತು.