ಕಠ್ಮಂಡು: ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಬಸ್ವೊಂದು ಕಂದಕಕ್ಕೆ ಬಿದ್ದ ಪರಿಣಾಮ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ 23 ಜನ ಮೃತಪಟ್ಟ ದುರ್ಘಟನೆ ನೇಪಾಳದಲ್ಲಿ ನಡೆದಿದೆ.
ಸಲ್ಯಾನ್ ಜಿಲ್ಲೆಯ ಕಪುರ್ ಕೋಟ್ನಿಂದ ಬಸ್ನಲ್ಲಿ ಕಾಲೇಜಿಗೆ ಹಿಂದಿರುಗುತ್ತಿದ್ದಾಗ ಈ ಅನಾಹುತ ಸಂಭವಿಸಿದೆ. ಬಸ್ ನಲ್ಲಿದ್ದ 37 ಜನರು ಪೈಕಿ ಚಾಲಕ, ಇಬ್ಬರು ಶಿಕ್ಷಕರು ಹಾಗೂ 20 ಜನ ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೆ 5 ಜನ ಮಹಿಳೆಯರು ಸೇರಿದಂತೆ 14 ಜನರ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿದ್ಯಾರ್ಥಿಗಳು ಸುಮಾರು 16ರಿಂದ 20 ವರ್ಷದವರು ಎಂದು ವರದಿಯಾಗಿದೆ.
ಘಟನೆಯ ವಿವರ:
ನೇಪಾಳದ ಕೃಷ್ಣ ಸೇನ್ ಇಚ್ಚುಕ್ ಪಾಲಿಕೆಟ್ನಿಕ್ ಇನ್ಸ್ಟಿಟ್ಯೂಟ್ನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಸ್ಯಶಾಸ್ತ್ರ ಅಧ್ಯಯನಕ್ಕೆಂದು ಸಲ್ಯಾನ್ ಜಿಲ್ಲೆಯ ಕಪುರ್ ಕೋಟ್ ತೆರಳಿದ್ದರು. ಶೈಕ್ಷಣಿಕ ಪ್ರವಾಸ ಮುಗಿಸಿಕೊಂಡು ಶುಕ್ರವಾರ ಮರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್ 700 ಮೀ. ಆಳದ ಕಂದಕಕ್ಕೆ ಬಿದ್ದಿದೆ. ಪರಿಣಾಮ 37 ಜನ ಪ್ರಯಾಣಿಕರಲ್ಲಿ 23 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ದಾಂಗ್ ಜಿಲ್ಲೆಯ ತುಲ್ಸಿಪುರ್ ಸಮೀಪದ ರಾಮ್ರಿ ಗ್ರಾಮದ ಬಳಿ ಇರುವ ಕಂದಕದಲ್ಲಿ ಈ ಅನಾಹುತ ಸಂಭವಿಸಿದೆ. ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಂಭೀರವಾಗಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.
ವೇಗವಾಗಿ ಚಾಲನೆ ಮಾಡಿದ್ದರಿಂದಲೇ ಬಸ್ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದಿ ಎಂದು ಪೊಲೀಸ್ ಅಧಿಕಾರಿ ಬೆಲ್ ಬಹುದ್ದುರ್ ಪಾಂಡೆ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv