ನೆಲಮಂಗಲ: ಬೆಳ್ಳಂಬೆಳಗ್ಗೆ ನಿದ್ರೆಯ ಮಂಪರಿನಲ್ಲಿ ಬಸ್ ಹಾಗೂ ಎರಡು ಲಾರಿಗಳ ಮಧ್ಯೆ ಡಿಕ್ಕಿಯಾಗಿ ಸರಣಿ ಅಪಘಾತವಾಗಿದ್ದು, ಭಾರೀ ಅನಾಹುತವೊಂದು ತಪ್ಪಿದೆ.
ಬೆಂಗಳೂರು ಹೊರವಲಯ ರಾಷ್ಟ್ರೀಯ ಹೆದ್ದಾರಿ 4ರ ನೆಲಮಂಗಲ ಸಮೀಪದ ಮಾದಾವರ ಬಳಿ ಸರಣಿ ಅಪಘಾತವಾಗಿದೆ. ಕೆಎಸ್ಆರ್ಟಿಸಿಯ ಓಲ್ವೋ ಬಸ್, ಪೆಟ್ರೋಲ್ ಟ್ಯಾಂಕರ್ ಲಾರಿಯನ್ನು ಓವರ್ ಟೇಕ್ ಮಾಡುವ ವೇಳೆ ಡಿಕ್ಕಿಯಾಗಿದೆ. ಇದೇ ವೇಳೆ ಹಿಂದಿನಿಂದ ಕಟ್ಟಿಗೆ ತುಂಬಿಕೊಂಡು ಬಂದ ಮತ್ತೊಂದು ಲಾರಿಯಿಂದ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಸರಣಿ ಅಪಘಾತವಾಗಿದೆ.
ಪೆಟ್ರೋಲ್ ಲಾರಿಯಲ್ಲಿದ್ದ ಇಬ್ಬರಿಗೆ ಹಾಗೂ ಕಟ್ಟಿಗೆ ಲಾರಿಯ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಮೂವರು ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಘಟನೆ ನಡೆದ ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ದೊಡ್ಡ ಅನಾಹುತವನ್ನ ತಪ್ಪಿಸಿದ್ದಾರೆ. ನೆಲಮಂಗಲ ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.