ನೆಲಮಂಗಲ: ಎರಡು ಶತಮಾನಗಳಿಂದಲೂ ನಡೆದುಕೊಂಡು ಬರುತ್ತಿದ್ದ ಇತಿಹಾಸ ಪ್ರಸಿದ್ಧ ದನಗಳ ಜಾತ್ರೆಗೆ ಈ ವರ್ಷ ಸಂಕಷ್ಟ ಎದುರಾಗಿದೆ.
ಬೆಂಗಳೂರು ಹೊರವಲಯ ನೆಲಮಂಗಲದ ತಾಲೂಕಿನ ಇತಿಹಾಸ ಪ್ರಸಿದ್ಧ ಮಹಿಮರಂಗ ಬೆಟ್ಟದ ದೇಗುಲದ ಇನ್ನೂರು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ದನಗಳ ಜಾತ್ರೆ ಈ ಬಾರಿ ಅರ್ಧಕ್ಕೆ ಮೊಟಕುಗೊಂಡಿದೆ.
ಕಾರಣವೇನು..?
ದೆಹಲಿ ಮೂಲದ ಪ್ರಾಣಿದಯಾ ಸಂಘದ ವ್ಯಕ್ತಿಯೊಬ್ಬರು ಇಲ್ಲಿ ನಡೆಯುವ ಜಾತ್ರೆ ಕುರಿತು ದೂರು ನೀಡಿದ್ದರು. ಇಲ್ಲಿ ನಡೆಯುವ ದನಗಳ ಜಾತ್ರೆಯಲ್ಲಿ ಅಕ್ರಮ ಮಾರಾಟ, ಸಾಗಾಟ, ರಾಸುಗಳಿಗೆ ಯಾವುದೇ ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿಲ್ಲ. ಮಾರಾಟಕ್ಕೆ ಯಾವುದೇ ಸೂಕ್ತ ಅನುಮತಿ ಪಡೆದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಜಾತ್ರೆ ಸ್ಥಳಕ್ಕೆ ತಹಶೀಲ್ದಾರ್ ಶ್ರೀನಿವಾಸಯ್ಯ, ಮುಜರಾಯಿ ಇಲಾಖೆ ಕಾರ್ಯಾನಿರ್ವಾಹಣಾಧಿಕಾರಿ ಚಂದ್ರಶೇಖರ್, ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ದನಗಳ ಜಾತ್ರೆಗೆ ಇನ್ನೂ ಕೆಲವೇ ದಿನಗಳ ಬಾಕಿ ಇದ್ದಾಗಲೇ ಸ್ಥಗಿತ ಮಾಡಲಾಗಿದೆ. ಒಟ್ಟಿನಲ್ಲಿ ಅನಾದಿ ಕಾಲದಿಂದಲೂ ನಡೆಯುತ್ತಿದ್ದ ಜಾತ್ರೆ ಈಗ ಏಕಾಏಕಿ ಅರ್ಧಕ್ಕೆ ಸ್ಥಗಿತ ಮಾಡಿರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.