ನವದೆಹಲಿ/ಕೀವ್: ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲಿ ಶೆಲ್ ದಾಳಿಗೆ ಬಲಿಯಾಗಿದ್ದ ಕನ್ನಡಿಗ ನವೀನ್ (22) ಮತದೇಹವನ್ನು ಕೊನೆಗೂ ತಾಯ್ನಾಡಿಗೆ ತರಲಾಗುತ್ತಿದೆ.
ಇದೇ ಭಾನುವಾರದಂದು(ಮಾರ್ಚ್ 20) ನವೀನ್ ಪಾರ್ಥೀವ ಶರೀರವನ್ನು ತರಲಾಗುತ್ತಿದ್ದು, ಅಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣ ತಲುಪಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ ಏನು?: ಖಾರ್ಕಿವ್ನಲ್ಲಿ ಮೆಡಿಕಲ್ ಓದುತ್ತಿದ್ದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕು ಚಳಗೇರಿಯ ನವೀನ್ ಸೂಪರ್ ಮಾರ್ಕೆಗೆ ಹೋಗಿ ಸಾಲಿನಲ್ಲಿ ನಿಂತಿದ್ದಾಗ ರಷ್ಯಾ ಶೆಲ್ ದಾಳಿಯಿಂದಾಗಿ ದುರ್ಮರಣಕ್ಕೀಡಾಗಿದ್ದರು.
ಅಂದು ಬೆಳಗ್ಗೆ 7.30ಕ್ಕೆ ರೈಲ್ವೇ ನಿಲ್ದಾಣಕ್ಕೆ ಹೋಗಬೇಕಿತ್ತು. ರೈಲಿನ ಮೂಲಕ ಪೋಲೆಂಡ್ ಗಡಿ ತಲುಪಬೇಕಿತ್ತು. ನವೀನ್ ಸೇರಿ 8 ಜನರ ತಂಡ ರೈಲ್ವೇ ನಿಲ್ದಾಣಕ್ಕೆ ಹೊರಡಬೇಕಿತ್ತು. ಈ ವೇಳೆ, ಎಲ್ಲರಿಗೂ ಊಟ ತರಲು ಬಂಕರ್ನಿಂದ ನವೀನ್ ಹೊರ ಹೋಗಿ ಸೂಪರ್ ಮಾರ್ಕೆಟ್ ಬಳಿ ಕ್ಯೂನಲ್ಲಿ ನಿಂತಿದ್ದ ವೇಳೆ ರಷ್ಯಾದ ಶೆಲ್ ಅವರನ್ನು ಆಹುತಿ ಪಡೆದಿತ್ತು. ಕನ್ನಡಿಗ ನವೀನ್ ತನ್ನ ಹೈಸ್ಕೂಲ್ ಹಾಗೂ ಪಿಯು ವಿದ್ಯಾಭ್ಯಾಸವನ್ನು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನಲ್ಲಿ ಪೂರ್ಣಗೊಳಿಸಿದ್ದರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.