ಗಾಂಧಿನಗರ: ಮಹಾತ್ಮಾ ಗಾಂಧಿ ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯ ಪ್ರತಿಮೆಯನ್ನು ಗುಜರಾತ್ನ ಕಾಂಗ್ರೆಸ್ ಕಾರ್ಯಕರ್ತರು ಇಂದು ಬೆಳಗ್ಗೆ ಧ್ವಂಸಗೊಳಿಸಿದ್ದಾರೆ.
ಈ ಮೂರ್ತಿಯನ್ನು ಹಿಂದು ಸೇನೆ ಸ್ಥಾಪಿಸಿತ್ತು. ಆದರೆ ಇದನ್ನು ಇಂದು ಬೆಳಗ್ಗೆ ಜಾಮ್ ನಗರದ ಕಾಂಗ್ರೆಸ್ ಅಧ್ಯಕ್ಷ ದಿಗುಭಾ ಜಡೇಜಾ ಹಾಗೂ ಅವರ ಸಹಚರರು ಸೇರಿ ಧ್ವಂಸಗೊಳಿಸಿದ್ದಾರೆ. ಅಲ್ಲದೆ ಧ್ವಂಸಗೊಳಿಸುತ್ತಿರುವ ವೇಳೆಯಲ್ಲಿ ಕಾರ್ಯಕರ್ತರೆಲ್ಲರು ಅದರ ಸುತ್ತಲು ಕೇಸರಿ ಬಣ್ಣದ ಬಟ್ಟೆಯನ್ನು ಸುತ್ತಿದ್ದಾರೆ.
ಆಗಸ್ಟ್ನಲ್ಲಿ ಜಾಮ್ನಗರದಲ್ಲಿ ನಾಥೂರಾಂ ಗೋಡ್ಸೆ ಪ್ರತಿಮೆ ಸ್ಥಾಪಿಸುವ ನಿರ್ಧಾರವನ್ನು ಹಿಂದೂ ಸೇನೆ ಪ್ರಕಟಿಸಿತ್ತು. ಆದರೆ ಈ ವೇಳೆ ಅಲ್ಲಿನ ಸ್ಥಳೀಯ ಅಧಿಕಾರಿಗಳು ಜಾಗವನ್ನು ನೀಡಲು ನಿರಾಕರಿಸಿದ್ದರು. ಹೀಗಾಗಿ ಸಂಘಟನೆಯು ಹನುಮಾನ್ ಆಶ್ರಮದಲ್ಲಿ ಪ್ರತಿಮೆಯನ್ನು ನಿರ್ಮಿಸಿ, ‘ನಾಥುರಾಮ್ ಗೋಡ್ಸೆ ಅಮರ್ ರಹೇ’ ಎಂಬ ಘೋಷಣೆಗಳನ್ನು ಎತ್ತಿತು. ಇದನ್ನೂ ಓದಿ: 20 ವರ್ಷಗಳಲ್ಲಿ 1,888 ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲೇ ಸಾವು – ಮೊದಲ ಸ್ಥಾನದಲ್ಲಿ ಗುಜರಾತ್
ಈ ಮಧ್ಯೆ 1949ರಲ್ಲಿ ಮಹಾತ್ಮಾ ಗಾಂಧಿ ಕೊಂದ ಹಂತಕನನ್ನು ಗಲ್ಲಿಗೇರಿಸಿದ ಹರಿಯಾಣದ ಅಂಬಾಲಾ ಸೆಂಟ್ರಲ್ ಜೈಲಿನಿಂದ ತಂದ ಮಣ್ಣಿನಿಂದ ನಾಥೂರಾಂ ಗೋಡ್ಸೆಯ ಪ್ರತಿಮೆಯನ್ನು ತಯಾರಿಸುವುದಾಗಿ ಹಿಂದೂ ಮಹಾಸಭಾ ಹೇಳಿತ್ತು. ಅಂತೆಯೇ ಕಳೆದ ವಾರ ಮಹಾಸಭಾ ಕಾರ್ಯಕರ್ತರು ಗೋಡ್ಸೆ ಮತ್ತು ನಾರಾಯಣ ಆಪ್ಟೆ ಅವರನ್ನು ಗಲ್ಲಿಗೇರಿಸಿದ ಅಂಬಾಲಾ ಜೈಲಿನಿಂದ ಮಣ್ಣನ್ನು ತಂದರು. ಈ ಮಣ್ಣನ್ನು ಗೋಡ್ಸೆ ಮತ್ತು ಆಪ್ಟೆ ಅವರ ಪ್ರತಿಮೆಗಳನ್ನು ತಯಾರಿಸಲು ಬಳಸಲಾಗುವುದು ಮತ್ತು ಅವುಗಳನ್ನು ಗ್ವಾಲಿಯರ್ನಲ್ಲಿರುವ ಮಹಾಸಭಾ ಕಚೇರಿಯಲ್ಲಿ ಸ್ಥಾಪಿಸಲಾಗುವುದು ಎಂದು ಹಿಂದೂ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಜೈವೀರ್ ಭಾರದ್ವಾಜ್ ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಭಾರೀ ಮಳೆ – 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್