ಹಾಸನ: ಯಾವುದೇ ಕಾರಣಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಲ್ಲ. ನಾನು ನುಡಿದಂತೆ ಆಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಜ್ಯೋತಿಷಿಗಳಂತೆ ಭವಿಷ್ಯ ನುಡಿದಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಈ ಹಿಂದೆ ನುಡಿದ ಭವಿಷ್ಯ ಸತ್ಯವಾಗಿದೆ. ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ ಅಂತಾ ಹೇಳಿದ್ದೆ ಅದು ನಿಜವಾಗಿದೆ. ಜೊತೆಗೆ ಫೆಬ್ರವರಿ 8ಕ್ಕೆ ಕುಮಾರಣ್ಣ ರಾಜ್ಯ ಬಜೆಟ್ ಮಂಡಿಸುತ್ತಾರೆ, ಜನತೆಗೆ ಒಳ್ಳೆ ಕೊಡುಗೆ ನೀಡುತ್ತಾರೆ ಅಂತ ಭವಿಷ್ಯ ನುಡಿದಿದ್ದೆ ಅದು ಕೂಡ ಸತ್ಯವಾಗಿದೆ. ಈಗ ಮತ್ತೆ ಭವಿಷ್ಯ ನುಡಿಯುತ್ತಿದ್ದೇನೆ, ಈ ಬಾರಿ ಲೋಕಸಭೆ ಚುನಾವನೆಯಲ್ಲಿ ಮೋದಿ ಗೆದ್ದು, ಪ್ರಧಾನಿಯಾಗಲ್ಲ ಅಂತ ಹೇಳುತ್ತಿದ್ದೇನೆ. ಇದು ಕೂಡ ನಿಜವಾಗುತ್ತೆ ಎಂದಿದ್ದಾರೆ.
ರಾಜ್ಯದಲ್ಲಿ ಯಡಿಯೂರಪ್ಪ ಅವರು ಗೆಲ್ಲುತ್ತಾರೆ ಅಂತ ಸುಮ್ಮನೆ ಕನಸು ಕಾಣುತ್ತಿದ್ದಾರೆ. ಅದು ನನಸಾಗಲ್ಲ, ಅವರೂ ಕೂಡ ಸೋಲುತ್ತಾರೆ. ನಂತರ ಮತ್ತೆ ಅವರು ನಮ್ಮ ಕಡೆ ಬರುವ ಪರಿಸ್ಥಿತಿ ಬರಬಹುದು ಎಂದು ಲೇವಡಿ ಮಾಡಿದ್ದಾರೆ.