-ನಾರಾಯಣಗೌಡರಿಗೆ ಹೊಟ್ಟೆ ಉರಿ
ಮಂಡ್ಯ: ಕೆ.ಆರ್ ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರು ಸಿಂಪತಿ ಗಿಟ್ಟಿಸಿಕೊಳ್ಳಲು, ನಮ್ಮ ಕಡೆಯಿದ್ದ ಜನರನ್ನು ನೋಡಿ ಹೊಟ್ಟೆ ಉರಿಯಿಂದ ಜೆಡಿಎಸ್ನವರು ಚಪ್ಪಲಿಯಲ್ಲಿ ಹೊಡೆದರು ಎನ್ನುತ್ತಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಎಲ್ ದೇವರಾಜು ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ಮಾಧುಸ್ವಾಮಿ ಅವರು ಯಾವುದೇ ಗಲಾಟೆಯಾಗಿಲ್ಲ, ಯಾರೂ ಚಪ್ಪಲಿಯಲ್ಲಿ ಹೊಡೆದಿಲ್ಲ ಎನ್ನುತ್ತಿದ್ದಾರೆ. ಆದರೆ ನಾರಾಯಣಗೌಡ ಅವರು ನನ್ನ ತಮ್ಮ ಚಪ್ಪಲಿಯಲ್ಲಿ ಹೊಡೆದಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ರಾಜಕೀಯ ಉದ್ದೇಶದಿಂದ ಹಾಗೆ ಹೇಳುತ್ತಿದ್ದಾರೆ. ನಮ್ಮ ತಮ್ಮ ಹಾಗೆ ನಡೆದುಕೊಂಡಿಲ್ಲ. ನಾರಾಯಣಗೌಡರ ಮೇಲೆ ಹಲ್ಲೆ ಮಾಡಿಲ್ಲ. ಚುನಾವಣೆಗೆ ಯಾವುದೇ ಕೆಲಸ ಮಾಡದ ನಾರಾಯಣಗೌಡ ಈಗ ಈ ಘಟನೆಯನ್ನ ಹಿಡಿದುಕೊಂಡು ಸಿಂಪತಿ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ನಮ್ಮ ಕಡೆಯಿದ್ದ ಜನರನ್ನು ನೋಡಿ ಹೊಟ್ಟೆ ಉರಿಯಿಂದ ಹೀಗೆ ಆರೋಪಿಸುತ್ತಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಎಕ್ಕಡದಲ್ಲಿ ಹೊಡೆದ್ರು, ದೇವರಾಜು ಅದನ್ನ ಅನುಭವಿಸಲೇ ಬೇಕು: ನಾರಾಯಣಗೌಡ ಆಕ್ರೋಶ
ನಾರಾಯಣಗೌಡರು ರಾಜೀನಾಮೆ ನೀಡದೆ ಹೋಗಿದ್ದರೆ ಚುನಾವಣೆ ನಡೆಯುತ್ತಿರಲಿಲ್ಲ. ನೀವು ರಾಜೀನಾಮೆ ನೀಡದಿದ್ದರೆ ಆ ರೀತಿಯ ಸ್ಥಿತಿಯೇ ನಿರ್ಮಾಣವಾಗುತ್ತಿರಲಿಲ್ಲ ಎಂದು ಟಾಂಗ್ ಕೊಟ್ಟರು. ಚಪ್ಪಲಿಯಲ್ಲಿ ಹೊಡೆದ ಘಟನೆ ನಡೆದಿಲ್ಲ, ನಮ್ಮ ಜೆಡಿಎಸ್ ಕಾರ್ಯಕರ್ತರು ಶಾಂತ ಸ್ವಭಾವದವರು. ಕಳೆದ ನಾಲ್ಕು ತಿಂಗಳುಗಳಿಂದ ನಮ್ಮ ಕಾರ್ಯಕರ್ತರು ಎಲ್ಲೂ ಗಲಾಟೆ ಮಾಡಿಲ್ಲ. ಅದರಲ್ಲೂ ಪೊಲೀಸರು, ಸುತ್ತಲೂ ಜನರಿರುವಾಗ ಹಲ್ಲೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ:ರಾಜ್ಯದ ಹೈವೋಲ್ಟೇಜ್ ಕ್ಷೇತ್ರ ಹೊಸಕೋಟೆಯಲ್ಲಿ ಚಿಮ್ಮಿತು ರಕ್ತ
ಇಂದು ನಾರಾಯಣಗೌಡರು ಉಪಚುನಾವಣಾ ನಾಮಪತ್ರ ಸಲ್ಲಿಸಲು ತಾಲೂಕು ಕಚೇರಿಗೆ ಆಗಮಿಸುತ್ತಿದ್ದರು. ಇತ್ತ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್, ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಸಹ ಇಂದೇ ನಾಮಪತ್ರ ಸಲ್ಲಿಕೆಗೆ ತಾಲೂಕು ಕಚೇರಿಗೆ ಆಗಮಿಸಿದ್ದರು. ಮೂರು ಪಕ್ಷಗಳ ಬೆಂಬಲಿಗರು ಒಂದೆಡೆ ಸೇರಿದ್ದರಿಂದ ಘೋಷಣೆಗಳು ಜೋರಾಗಿದ್ದವು. ಈ ವೇಳೆ ಕೆಲ ಕಿಡಿಗೇಡಿಗಳು ನಾರಾಯಣಗೌಡರ ಮೇಲೆ ಚಪ್ಪಲಿ ಎಸೆದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಇದನ್ನೂ ಓದಿ:ಜೆಡಿಎಸ್ ಕೋಟೆ ಛಿದ್ರ ಮಾಡಲು ನಾರಾಯಣಗೌಡ ಮಾಸ್ಟರ್ ಪ್ಲಾನ್!
ಈ ಕುರಿತು ಪ್ರತಿಕ್ರಿಯಿಸಿgದ ನಾರಾಯಣಗೌಡ, ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಅವರ ಸೋದರ ತಮ್ಮ ಬೆಂಬಲಿಗರೊಂದಿಗೆ ಹಲ್ಲೆ ನಡೆಸಿದ್ದಾರೆ. ನನಗೆ ಎಕ್ಕಡದಲ್ಲಿ ಹೊಡೆಸಿ, ಜೊತೆಯಲ್ಲಿದ್ದ ಸಚಿವ ಮಾಧುಸ್ವಾಮಿ ಅವರನ್ನು ನೂಕಾಡಿದ್ದಾರೆ. ಚಪ್ಪಲಿಯಲ್ಲಿ ಹೊಡಿಸುವ ಅಧಿಕಾರ ಯಾರಿಗಿದೆ ಎಂದು ಪ್ರಶ್ನೆ ಮಾಡಿ ಮುಂದಿನ ದಿನಗಳಲ್ಲಿ ಎಲ್ಲರು ಪರಿಣಾಮ ಎದುರಿಸಲಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದರು.
ನಾಮಪತ್ರ ಸಲ್ಲಿಸಿ ಹೊರ ಬಂದ ಕೂಡಲೇ ಜೆಡಿಎಸ್ ಕಾರ್ಯಕರ್ತರ ಗುಂಪು `ಬಾಂಬೆ ಕಳ್ಳ’ ಎಂದು ಕೂಗಲು ಆರಂಭಿಸಿದರು. ಕಾರ್ಯಕರ್ತರ ಗಲಾಟೆ ಹೆಚ್ಚಾಗುತ್ತಿದ್ದಂತೆ ಪೊಲೀಸರು ತಮ್ಮ ವಾಹನದಲ್ಲಿಯೇ ನಾರಾಯಣಗೌಡರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿದ್ದರು.