ಸ್ಯಾಂಡಲ್ವುಡ್ ಮಾತ್ರವಲ್ಲ ಸದ್ಯ ದೇಶದ ಮೂಲೆ ಮೂಲೆಗಳಲ್ಲೂ ಕಿಚ್ಚ ಸುದೀಪ್ ಅವರದ್ದೇ ಹವಾ ಶುರುವಾಗಿದೆ. ಬಹುನಿರೀಕ್ಷಿತ ಚಿತ್ರವಾದ `ವಿಕ್ರಾಂತ್ ರೋಣ’ ಸಿನಿ ಪ್ರಚಾರದಲ್ಲಿ ಕಿಚ್ಚ ಸುದೀಪ್ ಫುಲ್ ಬ್ಯೂಸಿಯಾಗಿದ್ದಾರೆ. ಪ್ರಚಾರದ ನಡುವೆಯೂ ಅವರು ತಮ್ಮ ಕೈಲಾದ ಸಹಾಯ ಮಾಡ್ತಿದ್ದಾರೆ.
ಆದ್ರೆ ಯುವಕನೊಬ್ಬ ಕಿಚ್ಚ ಸುದೀಪ್ ಬಗ್ಗೆ ವೀಡಿಯೋ ಮೂಲಕ ಅವಹೇಳನಕಾರಿ ಹೇಳಿಕೆ ನೀಡಿದ್ದಾನೆ. ಸುದೀಪ್ ಅವರು ನೀಡಿದ ಖಾಸಗಿ ಜಾಹೀರಾತಿನಿಂದಾಗಿ ಯುವಕನೊಬ್ಬ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಕುರಿತ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ. ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸುದೀಪ್ ಅಭಿಮಾನಿಗಳು ಮಾತ್ರವಲ್ಲದೇ ಕನ್ನಡ ಚಿತ್ರರಂಗದಿಂದಲೂ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಈ ಬೆನ್ನಲ್ಲೇ ನಿರ್ದೇಶಕ ನಂದಕಿಶೋರ್, ಅವಹೇಳನಕಾರಿ ವೀಡಿಯೋ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗದ ಕಲಾವಿದರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು ಎಂದಿದ್ದಾರೆ. ಇದನ್ನೂ ಓದಿ: ವಿಜಯ್ ದೇವರಕೊಂಡ ಅರೆ ನಗ್ನ ಫೋಟೋ ನೋಡಿ ರಶ್ಮಿಕಾ ಹೇಳಿದ್ದು ಹೀಗೆ
ಕನ್ನಡ ಕಲಾಭಿಮಾನಿಗಳೇ ನಮ್ಮ ತಂದೆ-ತಾಯಿ. ಇಲ್ಲಿ ಸುದೀಪ್, ಪುನೀತ್ ರಾಜ್ಕುಮಾರ್ ಸೇರಿದಂತೆ ಇತರ ಧೀಮಂತ ನಟರು ತಮ್ಮದೇ ಚೌಕಟ್ಟಿನಲ್ಲಿ ಸಹಾಯ ಮಾಡಿದ್ದಾರೆ. ಕೆಲವರು ಅಭಿಮಾನಿಗಳನ್ನೇ ದೇವರೆಂದು ತಲೆಯ ಮೇಲೆ ಹೊತ್ಕೊಂಡು ಮೆರೆದವರೂ ಇದ್ದಾರೆ. ಇಡೀ ಭಾರತವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುತ್ತಿದೆ. ಅದಕ್ಕೆ ಮೇರು ನಟರೇ ಕಾರಣ. ಅಂಥವರ ಬಗ್ಗೆ ಯಾರೋ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಇದೆಲ್ಲವೂ ಒಳ್ಳೆಯ ಬೆಳವಣಿಗೆಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ `ಮಹಾದೇವಿ’ ಖ್ಯಾತಿಯ ಮಾನಸಾ ಜೋಷಿ
ವೀಡಿಯೋ ಮಾಡಿರುವ ಯುವಕನ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ನಂದ ಕಿಶೋರ್, ಸುದೀಪ್ ಅವರಿಂದ ಯುವಕ ಆತ್ಮಹತ್ಯೆ ಮಾಡ್ಕೊಂಡ ಅಂತ ನಿನ್ನಿಂದ ಸಾಬೀತು ಮಾಡಲು ಸಾಧ್ಯನಾ? ಆತ್ಮಹತ್ಯೆಗೆ ಸುದೀಪ್ ಕಾರಣ ಅಂತಾ ಮನೆಯವರು ದೂರು ಕೊಟ್ಟಿದ್ದಾರಾ? ನಿನ್ನ ಬಳಿ ಸಾಕ್ಷ್ಯಾಧಾರವಿದ್ದರೆ ಕಾನೂನು ಬದ್ಧವಾಗಿ ಕೋರ್ಟ್ನಲ್ಲಿ ಹೋರಾಡು ಅಥವಾ ಕನ್ನಡ ಚಲನಚಿತ್ರ ಮಂಡಳಿಯಲ್ಲಿ ದೂರು ಕೊಡು. ಅದನ್ನು ಬಿಟ್ಟು ಹಾದಿಬೀದಿಯಲ್ಲಿ ನಿಂತು ಮಾತನಾಡಬಾರದು. ಕನ್ನಡ ಮೇರು ನಟರಿಗೆ, ಕಲಾಭಿಮಾನಿಗಳ ಬಗ್ಗೆ ಹೀನ ಪದ ಬಳಸುವುದರಿಂದಲೇ ಗೊತ್ತಾಗುತ್ತೆ ನಿನ್ನ ಸಂಸ್ಕೃತಿ. ನಿನ್ನ ಪ್ರಚಾರಕ್ಕಾಗಿ ಸುದೀಪ್ ಅವರ ಹೆಸರು ಬಳಸಿಕೊಳ್ಳುತ್ತಿದ್ದೀಯಾ? ನೀನು ನಪುಂಸಕ ಅಲ್ಲದೇ ಇದ್ದಿದ್ರೆ ಫೋನ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿರಲಿಲ್ಲ. ನೀನು ಗಂಡಸಾಗಿದ್ದರೆ ಸಾಬೀತು ಮಾಡು ಎಂದು ಸವಾಲು ಹಾಕಿದ್ದಾರೆ.
ಕನ್ನಡ ಚಿತ್ರರಂಗದ ಕಲಾವಿದರು ಅಭಿಮಾನಿಗಳ ಮನೆ ಮಕ್ಕಳು. ಅವರನ್ನು ಬೇರ್ಪಡಿಸಬೇಡಿ. ಡಾ.ರಾಜ್ಕುಮಾರ್ ಅವರು ಅಭಿಮಾನಿಗಳನ್ನೇ ದೇವರು ಅಂತ ಕರೆದಿದ್ದಾರೆ. ಬೇರೆ ಯಾರಾದ್ರು ಮಾತನಾಡಿದ್ರೆ ನೀವೇ ನಮ್ಮನ್ನ ರಕ್ಷಣೆ ಮಾಡಬೇಕು. ಏಕೆಂದರೆ ನಾವು ಬೆಳೆಯೋದು ಅಭಿಮಾನಿಗಳಿಂದಲೇ ಎಂದು ಮನವಿ ಮಾಡಿದ್ದಾರೆ.