ಬೆಂಗಳೂರು: ಮಾರ್ಚ್ 22 ರಂದು ನಡೆಯಲು ಉದ್ದೇಶಿಸಿದ್ದ ನಮ್ಮ ಮೆಟ್ರೊ ನೌಕರರ ಮುಷ್ಕರ ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದೆ.
ಎಸ್ಮಾ ತಡೆಯಾಜ್ಞೆ ತೆರವುಗೊಳಿಸುವಂತೆ ಬಿಎಂಆರ್ ಸಿಎಲ್ ಹಾಕಿದ್ದ ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ಇಂದು ಎರಡು ಕಡೆಯವರೆಗೆ ಕುಳಿತು ಸಂಧಾನ ನಡೆಸುವಂತೆ ಸೂಚನೆ ನೀಡಿದೆ. ಎರಡು ಕಡೆಯವರು ಸಮಾಧಾನದಿಂದ ವರ್ತಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಿ ಎಂದು ಸೂಚನೆ ನೀಡಿತು.
ಹೈಕೋರ್ಟ್ ಆದೇಶದ ಮೇರೆಗೆ ಮೆಟ್ರೊ ನೌಕರರು ತಮ್ಮ ಮುಷ್ಕರವನ್ನು 1 ತಿಂಗಳವರೆಗೆ ಮುಂದೂಡಿದ್ದಾರೆ. ಮಾತುಕತೆ ಫಲಪ್ರದವಾಗದೇ ಇದ್ದಲ್ಲಿ ಮತ್ತೆ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬಡ್ತಿ, ವೇತನ ಪರಿಷ್ಕರಣೆ, ಕನ್ನಡಿಗ ನೌಕರರು ಹಾಗೂ ಹಿಂದಿ ನೌಕರರ ನಡುವೆ ತಾರತಮ್ಯ ತಡೆ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮೆಟ್ರೊ ನೌಕರರು ಮಾ. 22 ರಂದು ಮುಷ್ಕರ ನಡೆಸಲು ಮುಂದಾಗಿದ್ದರು. ಮೆಟ್ರೊ ಸಾರ್ವಜನಿಕ ಸೇವೆಯಾಗಿದ್ದು, ಇದಕ್ಕೆ ಅಡಚಣೆ ಮಾಡುವುದು ಕಾನೂನು ಬಾಹಿರ. ಒಂದು ವೇಳೆ ಮುಷ್ಕರಕ್ಕೆ ಇಳಿದರೆ ಎಸ್ಮಾ ಜಾರಿಗೊಳಿಸಲಾಗುತ್ತದೆ ಎಂದು ಬಿಎಂಆರ್ಸಿಎಲ್ ಎಚ್ಚರಿಕೆ ನೀಡಿತ್ತು.