ಹಿರಿಯ ನಟ ಜಗ್ಗೇಶ್ (Jaggesh) ಕಾಲು ಮುರಿದುಕೊಂಡಿರುವ ವಿಷಯವನ್ನು ಮೊನ್ನೆಯಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗ ಪಡಿಸಿದ್ದರು. ಕಾಲು ಮುರಿದುಕೊಂಡು ಚಿಕಿತ್ಸೆ ಪಡೆದುಕೊಂಡಿದ್ದ ಫೋಟೋವನ್ನು ಶೇರ್ ಮಾಡಿದ್ದ ಅವರು, ‘ಸಣ್ಣ ಅಚಾತುರ್ಯ ನಡಿಗೆಯಿಂದಾಗಿ ಕಾಲು ಮುರಿದುಕೊಂಡಿದ್ದೇನೆ (Fractured leg). ಪಾದದ ಮೂಳೆ ಮುರಿದಿದೆ. ಆರು ವಾರಗಳ ಕಾಲ ‘ದಿಘ್ಬಂಧನ’ ನಡಿಗೆಗೆ ಎಂದು ಬರೆದುಕೊಂಡಿದ್ದರು. ‘ದಿಘ್ಬಂಧನ’ ಪದ ತಪ್ಪಾಗಿರುವ ಕುರಿತು ನಿರ್ದೇಶಕ, ಸಿನಿಮಾ ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ಸೋಷಿಯಲ್ ಮೀಡಿಯಾದ ಮೂಲಕವೇ ಜಗ್ಗೇಶ್ ಅವರಿಗೆ ಕನ್ನಡ (Kannada) ಪಾಠ ಮಾಡಿದ್ದಾರೆ.
ಜಗ್ಗೇಶ್ ಹಾಕಿರುವ ಪೋಸ್ಟ್ ಗೆ ಉತ್ತರವಾಗಿ ಬರೆದಿರುವ ನಾಗತಿಹಳ್ಳಿ ಚಂದ್ರಶೇಖರ್ (Nagatihalli Chandrasekhar), ‘ದಿಘ್ಬಂದನ ಅಲ್ಲ, ದಿಗ್ಬಂಧನ. ಅನಗತ್ಯವಾಗಿ ಮಹಾಪ್ರಾಣ ಪ್ರಯೋಗಿಸಬೇಡಿ. ಮೂಳೆ ಮುರಿತ ಬೇಗ ಗುಣವಾಗಲಿ. ಸಕ್ಕರೆ ರೋಗವಿದ್ದಲ್ಲಿ ಹೆಚ್ಚು ಜೋಪಾನ ವಹಿಸಿ. ಶುಭವಾಗಲಿ. ಪ್ರೀತಿಯಿಂದ ನಾಗತಿಹಳ್ಳಿ ಚಂದ್ರಶೇಖರ್ ಎಂದು ಬರೆದಿದ್ದಾರೆ. ಇದನ್ನೂ ಓದಿ:ಫ್ಯಾಷನ್ ರೂಲ್ಸ್ ಬ್ರೇಕ್ ಮಾಡಿ, ನೆಕ್ಲೇಸ್ ಧರಿಸಿ ಹಾಡಿದ ಸಂಜಿತ್ ಹೆಗ್ಡೆ
ಸದ್ಯ ಜಗ್ಗೇಶ್ ಯಾವುದೇ ಸಿನಿಮಾ ಶೂಟಿಂಗ್ ನಲ್ಲಿ ಇರದೇ ಇರುವ ಕಾರಣದಿಂದಾಗಿ ಇವರ ಕಾಲು ಮುರಿತ ಯಾರಿಗೂ ತೊಂದರೆ ಮಾಡದು. ಆದರೂ, ವೈದ್ಯರು ಸಲಹೆಯಂತೆ ವಿಶ್ರಾಂತಿ ಪಡೆದುಕೊಳ್ಳಿ. ಬೇಗ ಕಾಲು ಗುಣಮುಖವಾಗಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ. ನೆಚ್ಚಿನ ನಟನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ.
ಇತ್ತೀಚೆಗಷ್ಟೇ ಜಗ್ಗೇಶ್ ಅವರ ರಾಘವೇಂದ್ರ ಸ್ಟೋರ್ಸ್ (Raghavendra Stores) ಸಿನಿಮಾ ರಿಲೀಸ್ ಆಗಿತ್ತು. ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲವಾದ್ದರೂ, ಒಂದೊಳ್ಳೆ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೀಗ ಜಗ್ಗೇಶ್ ರಂಗನಾಯಕ ಚಿತ್ರದಲ್ಲಿ ನಟಿಸಿದ್ದಾರೆ. ಗುರು ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕು.