ಬಾಗಲಕೋಟೆ: ಒಂದು ಕಡೆ ರಾಹುಲ್ ಗಾಂಧಿ ಭಾರತ್ ಜೋಡೋ ಎನ್ನುತ್ತಾರೆ. ಮತ್ತೊಂದೆಡೆ ಅವರ ಪಕ್ಷದ ಸಂಸದ ಡಿ.ಕೆ ಸುರೇಶ್ (D.K Suresh) ಭಾರತ್ ತೋಡೋ ಎನ್ನುತ್ತಿದ್ದಾರೆ. ಕಾಂಗ್ರೆಸ್ನವರಿಗೆ (Congress) ಬುದ್ಧಿ ಭ್ರಮಣೆಯಾಗಿದೆಯೇ? ಎಂದು ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ (N.Ravikumar) ವ್ಯಂಗ್ಯವಾಡಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತ್ಯೇಕ ರಾಷ್ಟ್ರದ ಬಗ್ಗೆ ಸಂಸದ ಡಿ.ಕೆ.ಸುರೇಶ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ, ಇವರು ಮುಂಚೆಯಿಂದಲೂ ಭಾರತ್ ತೋಡೋ ಮಾಡಿಕೊಂಡೇ ಬಂದಿದ್ದಾರೆ. ಹಿಂದೂಸ್ತಾನ, ಪಾಕಿಸ್ತಾನ ನಿರ್ಮಾಣ ಮಾಡಿದವ್ರು ಯಾರು? ಕಾಶ್ಮಿರದಲ್ಲಿ ಆರ್ಟಿಕಲ್ 371 ತಂದವರು ಯಾರು? ಕಾಂಗ್ರೆಸ್ ಅಂದ್ರೆ ತೋಡೋ ಪಾರ್ಟಿ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ರದ್ದು ಹೇಳಿಕೆ; ‘ಕೈ’ ಶಾಸಕನ ವಿರುದ್ಧ ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು
ಅನುದಾನ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ವಿಚಾರವಾಗಿ, ಜಿಎಸ್ಟಿ ದೇಶದ್ದು, ಬಿಜೆಪಿದ್ದಲ್ಲ, ಎಲ್ಲಾ ರಾಜ್ಯಗಳಿಗೆ ತೆರಿಗೆ ಸರಿಯಾಗಿ ಕೊಟ್ಟಿದ್ದೇವೆ. ಕಾಂಗ್ರೆಸ್ನವರು ಚರ್ಚೆಗೆ ಬರಲಿ. ಜನಸಂಖ್ಯೆ ಆಧಾರದ ಮೇಲೆ ಅನುದಾನ ಜಾಸ್ತಿ ಮಾಡಲಾಗುತ್ತದೆ ಎಂದಿದ್ದಾರೆ.
ಕೆಲವರು ನನ್ನ ಸಂಪರ್ಕದಲ್ಲಿದ್ದಾರೆ, ಅವರೆಲ್ಲ ಬಿಜೆಪಿಗೆ ಬರುತ್ತಾರೆ ಎಂಬ ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರವಾಗಿ, ಆಪರೇಷನ್ ಏನೂ ಇಲ್ಲ, ಅವರ ಜೊತೆ ಅನೇಕರು ಸಂಪರ್ಕದಲ್ಲಿದ್ದಾರೆ. ನಮ್ಮ ಕಡೆಯಿಂದ ಕಾಂಗ್ರೆಸ್ಗೆ ಹೋದವರು ಅನೇಕರು ಮರಳಿ ಪಕ್ಷಕ್ಕೆ ಸೇರಲಿದ್ದಾರೆ ಎಂದು ಅವರು ಹೇಳಿದ್ದಾರೆ.
ದೇಶದ ಆರ್ಥಿಕ ಸ್ಥಿತಿ ಬಹಳ ಕೆಟ್ಟದಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಸಿದ ಅವರು, ನೂರು ಜನ ಆರ್ಥಿಕ ತಜ್ಞರ ಪೈಕಿ, ಎಂಟತ್ತು ಜನ ಟೀಕೆ ಮಾಡಿರಬಹುದು. ಸೀತಾರಾಮನ್ ಅವರ ಮನೆಯಲ್ಲಿ ಯಜಮಾನರೇ ಇರಬಹುದು. ಅವರು ಯಾವ ಪಾರ್ಟಿ? ಮುಂಚಿನಿಂದಲೂ ಅವರ ಇತಿಹಾಸ ಏನು? ಅವರು ಯಾವತ್ತಾದರೂ ನರೇಂದ್ರ ಮೋದಿ ಅವರನ್ನು ಹೊಗಳಿದ್ದು ಇದೆಯಾ? ಅವರು ಕಮ್ಯುನಿಸ್ಟ್ ಪಾರ್ಟಿಯನ್ನೇ ಹೊಗಳುತ್ತಾರೆ. ಏನು ಮಾಡಿದೆ ಕಮ್ಯುನಿಸ್ಟ್ ಪಾರ್ಟಿ? ಎಲ್ಲಾ ಕಾರ್ಖಾನೆಗಳನ್ನು ಬಂದ್ ಮಾಡಿದೆ. ಅವರದ್ದು ನಾಲ್ಕು ಸೀಟು ಹೆಚ್ಚಿಗೆ ಆಗಿದ್ದು ಇದೆಯಾ? ಸಂಸತ್ನಲ್ಲಿ ಎಷ್ಟು ಸೀಟು ಇವೆ ಎನ್ನುವುದು ಮಾನದಂಡ ಆಗುತ್ತದೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಮೋದಿ ಜೊತೆ ಹೋದರೂ ನಾನು ಕೇಸರಿ ಶಾಲು ಹಾಕಲ್ಲ, ಕುಮಾರಸ್ವಾಮಿಯೂ ಹಾಕಬಾರದಿತ್ತು – ಹೆಚ್ಡಿಡಿ