ಮೈಸೂರು: ಮೈಸೂರು ಊಟಿ ಹೆದ್ದಾರಿಯಲ್ಲಿನ ಟೋಲ್ ರದ್ದು ಮಾಡುವಂತೆ ರೈತರು ಪ್ರತಿಭಟನೆ ನಡೆಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯ ಕೆ.ಎಂ. ಹುಂಡಿ ಬಳಿ ರೈತ ಸಂಘ, ಕನ್ನಡ ಪರ ಸಂಘಟನೆ ಸದಸ್ಯರು, ಲಾರಿ ಮಾಲೀಕರು ಪ್ರತಿಭಟಿಸಿ ಟೋಲ್ ರದ್ದಿಗೆ ಆಗ್ರಹಿಸಿದರು.
ರಸ್ತೆಯಲ್ಲಿ ಕುಳಿತು, ಪಕ್ಕದಲ್ಲೆ ಅಡುಗೆ ಮಾಡಿಕೊಂಡು ಪ್ರತಿಭಟನೆ ನಡೆಸಿದ್ದು, ಟೋಲ್ ಹೆಸರಿನಲ್ಲಿ ರೈತರ ಸುಲಿಗೆ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು, ಇಲ್ಲ ಸ್ಥಳೀಯರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಕೇವಲ 5 ಕಿ.ಮೀ ಪ್ರಯಾಣಿಸಿದರೂ ನೂರಾರು ರೂಪಾಯಿ ಟೋಲ್ ಕಟ್ಟುವ ಪರಿಸ್ಥಿತಿ ಇದೆ. ಇದರಿಂದ ಕೆ.ಎಸ್.ಆರ್.ಟಿ.ಸಿ ಬಸ್ ಪ್ರಯಾಣದಲ್ಲೂ ಏರಿಕೆಯಾಗಿದೆ. ರೈತರ ಉತ್ಪನ್ನಗಳನ್ನ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಟೋಲ್ ಕಟ್ಟುವ ಪರಿಸ್ಥಿತಿ ಇದೆ. ಹೀಗಾಗಿ, ಟೋಲ್ ಸಂಗ್ರಹ ರದ್ದು ಮಾಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.