– ಫರಾನ್ಗೆ ಹೆಸರು ಮಾಡುವ ಹುಚ್ಚು ಹಿಡಿದಿತ್ತು
– ಪೊಲೀಸರಿಗೆ ಫರಾನ್ ಸ್ನೇಹಿತರಿಂದ ವಿವರಣೆ
ಮೈಸೂರು: ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಫರಾನ್ ಗಣ್ಯರನ್ನ ಕೊಲೆ ಮಾಡಿ ಹೆಸರು ಮಾಡ್ತಿನಿ ಎಂದು ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದ ಸ್ಫೋಟಕ ವಿಚಾರ ಈಗ ಬಹಿರಂಗವಾಗಿದೆ.
ಭಾನುವಾರ ರಾತ್ರಿ ಮದುವೆ ಸಮಾರಂಭಕ್ಕೆ ಹೋಗಿದ್ದ ತನ್ವೀರ್ ಸೇಠ್ ಅವರ ಮೇಲೆ ಆರೋಪಿ ಫರಾನ್ ಚಾಕುವಿನಿಂದ ಹಲ್ಲೆ ಮಾಡಿದ್ದ. ಈ ವಿಚಾರದ ತನಿಖೆ ವೇಳೆ ಫಾರನ್ ಸ್ನೇಹಿತರನ್ನು ಕರೆದು ಪೊಲೀಸರು ವಿಚಾರಣೆ ನಡೆಸಿದಾಗ, ಫರಾನ್ ಗಣ್ಯರನ್ನ ಕೊಲೆ ಮಾಡಿ ಹೆಸರು ಮಾಡುತ್ತೇನೆ ಎಂದು ಅವನ ಆಪ್ತರು ಹಾಗೂ ಗೆಳೆಯರೊಂದಿಗೆ ಹೇಳಿಕೊಂಡಿದ್ದ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ತನ್ವೀರ್ ಕೊಲೆ ಯತ್ನ ಪ್ರಕರಣ ತನಿಖೆ ಚುರುಕುಗೊಳಿಸಿರುವ ಪೊಲೀಸರು ಫರಾನ್ ಜೊತೆಗೆ ಫೋಟೋದಲ್ಲಿ ಗುರುತಿಸಿಕೊಂಡಿದ್ದ ಸ್ನೇಹಿತರನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡಿದ್ದಾರೆ. ಈ ವೇಳೆ ಆತನ ಸ್ನೇಹಿತರು, ಫರಾನ್ಗೆ ಇತ್ತೀಚೆಗೆ ಹೆಸರು ಮಾಡುವ ಹುಚ್ಚು ಹಿಡಿದಿತ್ತು. ನಮ್ಮ ಜೊತೆಗೆ ವಿಐಪಿ ಒಬ್ಬರನ್ನು ಕೊಲೆ ಮಾಡಿ ಫೇಮಸ್ ಆಗುತ್ತೇನೆ ಎಂದು ಹೇಳಿದ್ದ. ಯಾರು ಆ ವಿಐಪಿ? ಯಾವಾಗ ಮಾಡುತ್ತೇನೆ ಎಂದು ಹೇಳಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನು ಓದಿ: ಏರಿಯಾದಲ್ಲಿ ಹವಾ ಸೃಷ್ಟಿಸಲು 20ಕ್ಕೂ ಹೆಚ್ಚು ಕಾರುಗಳನ್ನು ಜಖಂಗೊಳಿಸಿದ ಪುಂಡರು ಅರೆಸ್ಟ್
ಆತ ತಮಾಷೆಗೆ ಹೇಳುತ್ತಿದ್ದಾನೆ ಎಂದುಕೊಂಡಿದ್ದೇವು. ಆದರೆ ಭಾನುವಾರ ರಾತ್ರಿ ತನ್ವೀರ್ ಸೇಠ್ ಮೇಲಿನ ಕೊಲೆಯತ್ನ ಕಂಡು ನಮಗೂ ಭಯವಾಗಿದೆ ಎಂದು ಫರಾನ್ ಸ್ನೇಹಿತರು ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.
ಏನಿದು ಪ್ರಕರಣ?
ಭಾನುವಾರ ರಾತ್ರಿ ಮೈಸೂರಿನ ತನ್ವೀರ್ ಸೇಠ್ ಬನ್ನಿ ಮಂಟಪ ಸಮೀಪದ ಪಾರ್ಟಿ ಹಾಲಿಗೆ ತಮ್ಮ ಆತ್ಮೀಯ ಮಗನ ಮದುವೆಯ ಬೀಗರೂಟಕ್ಕೆ ಆಗಮಿಸಿದ್ದರು. ಈ ವೇಳೆ ಯುವಕ ಫರಾನ್ (24) ಚಾಕುವಿನಿಂದ ಹಲ್ಲೆ ಮಾಡಿದ್ದ. ಅವರ ಕತ್ತಿಗೆ ಭಾಗಕ್ಕೆ ಚಾಕು ಹಾಕಿ ಪರಾರಿಯಾಗುತ್ತಿದ್ದ ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ನಂತರ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸೇಠ್ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.