ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗಿದ್ದು, ಇಂದು ತುಲಾ ಲಗ್ನದಲ್ಲಿ ಗಜಪಡೆ ಅರಮನೆಯನ್ನು ಪ್ರವೇಸಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಆನೆಗಳನ್ನು ಸ್ವಾಗತಿಸಿದ್ದಾರೆ.
ಅಂಬಾವಿಲಾಸ ಅರಮನೆಯಂಗಳಕ್ಕೆ ಗಜಪಡೆ ಆಗಮಿಸಿದ್ದು, ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಎಂಟು ಆನೆಗಳು ಅರಮನೆಗೆ ಬಂದಿವೆ. ಬೆಳಗ್ಗೆ 6:45ಕ್ಕೆ ಮೈಸೂರಿನ ಅಶೋಕಪುರಂನ ಅರಣ್ಯ ಭವನದಲ್ಲಿ ಸಾಂಪ್ರದಾಯಿಕ ಪೂಜೆ ನೆರವೇರಿದ್ದು, ಬಳಿಕ 7:35ಕ್ಕೆ ಅರಣ್ಯ ಭವನದಿಂದ ಅರಮನೆಯತ್ತ ಮೆರವಣಿಗೆ ಮೂಲಕ ಆನೆಗಳು ಆಗಮಿಸಿವೆ. ಇದನ್ನೂ ಓದಿ: 2022ರಲ್ಲಿ ಭಾರತದ ಜಿಡಿಪಿ ಶೇ.6.7 – ವಿಶ್ವದಲ್ಲೇ ಅತ್ಯಂತ ವೇಗದ ಬೆಳವಣಿಗೆ
ಬೆಳಗ್ಗೆ 8:36 ರಿಂದ 9:11ರ ತುಲಾ ಲಗ್ನದಲ್ಲಿ ಆನೆಗಳು ಅರಮನೆ ಪ್ರವೇಶ ಮಾಡಿವೆ. ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ದಸರಾ ಗಜಪಡೆಗೆ ಸಾಂಪ್ರದಾಯಿಕ, ಪೂಜೆ, ಸರ್ಕಾರಿ ಗೌರವಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಗಜಪಡೆಗೆ ಸ್ವಾಗತ ಕೋರಿದ್ದಾರೆ. ಕಾರ್ಯಕ್ರಮದಲ್ಲಿ ಗಣ್ಯರು ಭಾಗಿಯಾಗಿದ್ದಾರೆ.
ಬೆಚ್ಚಿದ ಅಶ್ವತ್ಥಾಮ
ನಗರದ ಸದ್ದುಗದ್ದಲಕ್ಕೆ ಅಶ್ವತ್ಥಾಮ ಬೆಚ್ಚಿದ್ದಾನೆ. ಅಶ್ವತ್ಥಾಮ ಆನೆ ಮೊದಲ ಬಾರಿಗೆ ದಸರಾಗೆ ಬಂದಿದೆ. ಹೀಗಾಗಿ ನಗರದ ಸದ್ದುಗದ್ದಲಕ್ಕೆ ಬೆಚ್ಚಿ ಫುಟ್ಪಾತ್ ಏರಿತ್ತು. ಅರಣ್ಯಭವನದಿಂದ ಅರಮನೆಗೆ ಬರುವ ವೇಳೆ ರಸ್ತೆಯಿಂದ ಫುಟ್ಪಾತ್ ಮಾರ್ಗಕ್ಕೆ ತೆರಳಿತ್ತು. ಬಳಿಕ ಮಾವುತ, ಕಾವಾಡಿ ಆನೆಯನ್ನು ನಿಯಂತ್ರಿಸಿ, ಫುಟ್ಪಾತ್ನಿಂದ ಕೆಳಗಿಳಿಸಿ, ರಸ್ತೆಯಲ್ಲಿ ಆನೆಯನ್ನು ಕರೆದುಕೊಂಡು ಅರಮನೆಗೆ ಕರೆತರಲಾಯಿತು.