ಮೈಸೂರು: ಎರಡು ವರ್ಷಗಳ ಬಳಿಕ ವಿಜೃಭಣೆಯಿಂದ ನಡೆಯುತ್ತಿರುವ ವಿಶ್ವ ವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದ ಐತಿಹಾಸಿಕ ಜಂಬೂ ಸವಾರಿ (Jambu Savari) ಮೆರವಣಿಗೆಗೆ ಚಾಲನೆ ದೊರೆತಿದೆ. 750 ಕೆ.ಜಿ ತೂಕದ ಅಂಬಾರಿಯಲ್ಲಿ ಚಾಮುಂಡಿದೇವಿಯನ್ನು (Chamundeshwari) ಹೊತ್ತುಕೊಂಡು ಅಭಿಮನ್ಯು ಬನ್ನಿ ಮಂಟಪದತ್ತ ರಾಜಗಾಂಭಿರ್ಯದಿಂದ ಹೆಜ್ಜೆ ಹಾಕುತ್ತಿದ್ದಾನೆ.
ಸಾಂಸ್ಕೃತಿಕ ರಾಜಧಾನಿ ಮೈಸೂರು (Mysuru) ಮತ್ತೊಮ್ಮೆ ರಾಜ ವೈಭೋಗಕ್ಕೆ ಸಾಕ್ಷಿಯಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸಂಜೆ 5.40ಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.
1610ರಲ್ಲಿ ಆರಂಭಗೊಂಡ ದಸರಾ ಮಹೋತ್ಸವಕ್ಕೆ 4 ದಶಕಗಳ ಭವ್ಯ ಇತಿಹಾಸವಿದೆ. ಮೈಸೂರು ದಸರಾ ದೇಶದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಲ್ಲೇ ಚಿರಪರಿಚಿತ ಹಾಗೂ ಪ್ರಖ್ಯಾತಿ ಪಡೆದಿದೆ. ಆದರೆ ಕೊರೊನಾ ಕಾರಣಕ್ಕೆ ಎರಡು ವರ್ಷಗಳಿಂದ ದಸರಾ ಸೊರಗಿತ್ತು. ಆದರೆ ಈ ವರ್ಷ ಅತ್ಯಂತ ಸಡಗರದಿಂದ ದಸರಾ ದಿಬ್ಬಣ ನೆರವೇರಿದೆ. ಸಾಲಂಕೃತ ಗಜಪಡೆಯ ನೇತೃತ್ವ ವಹಿಸಿದ್ದ ಕ್ಯಾಪ್ಟನ್ ಅಭಿಮನ್ಯು ಅಂಬಾರಿ ಹೊತ್ತು ಮೈಸೂರಿನ ಪ್ರಮುಖ ಬೀದಿಗಳಲ್ಲಿ ಹೆಜ್ಜೆ ಹಾಕುತ್ತಿದ್ದಾನೆ.
ಬೆಳಗ್ಗೆಯಿಂದಲೂ ಅಂಬಾವಿಲಾಸ ಅರಮನೆ ಆವರಣದಲ್ಲಿ ಸಂಪ್ರದಾಯ ಬದ್ಧ ಕಾರ್ಯಕ್ರಮಗಳು ನಡೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಪುಟ ಸಹೋದ್ಯೋಗಿಗಳ ಜೊತೆಗೆ ಐರಾವತ ಬಸ್ ಮೂಲಕ ಆಗಮಿಸಿ ಮಧ್ಯಾಹ್ನ 2:50ಕ್ಕೆ ನಂದಿ ಧ್ವಜಕ್ಕೆ ಪೂಜೆ ಮಾಡುವ ಮೂಲಕ ದಸರಾ ದಿಬ್ಬಣಕ್ಕೆ ಚಾಲನೆ ನೀಡಿದರು.
ಮುಖ್ಯಮಂತ್ರಿಗಳು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುತ್ತಿದ್ದಂತೆ ಕಲಾ ತಂಡಗಳ ಹಾಗೂ ಟ್ಯಾಬ್ಲೋಗಳ ಮೆರವಣಿಗೆ ಆರಂಭವಾಯಿತು. ಕೀಲುಗೊಂಬೆ, ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ ಹೀಗೆ ಹತ್ತು ಹಲವು ಬಗೆಯ ಕಲಾ ಪಾಂಡಿತ್ಯ ಪ್ರದರ್ಶನಗೊಂಡಿದೆ. ಸ್ತಬ್ಧ ಚಿತ್ರಗಳ ಯಾತ್ರೆಯಲ್ಲಂತೂ ಪುನೀತ್ ರಾಜ್ ಕುಮಾರ್ ಟ್ಯಾಬ್ಲೋ ವಿಶೇಷ ಸ್ಥಾನ ಪಡೆದಿದೆ. ಪೊಲೀಸ್ ಬ್ಯಾಂಡ್ ಸಹ ವೀಕ್ಷಕರಿಗೆ ಮುದ ನೀಡುತ್ತಿದೆ.
3ನೇ ಬಾರಿಗೆ ಅಂಬಾರಿ ಹೊತ್ತ ಅಭಿಮನ್ಯುಗೆ ನಿಶಾನೆ ಆನೆಯಾಗಿ ಅರ್ಜುನ, ನೌಫತ್ ಮತ್ತು ಸಾಲಾನೆಯಾಗಿ ಗೋಪಿ, ಧನಂಜಯ, ಮಹೇಂದ್ರ, ಭೀಮ, ಗೋಪಾಲಸ್ವಾಮಿ ಸಾಥ್ ನೀಡಿದರೆ, ಕಾವೇರಿ ಮತ್ತು ಚೈತ್ರ ಎಂಬ ಹೆಣ್ಣಾನೆಗಳು ಕುಮ್ಕಿ ಆನೆಗಳ ಪಾತ್ರವಹಿಸಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್ಸಿಗರ ಭಾರತ ಬಿಟ್ಟು ಓಡೋ ಯಾತ್ರೆ: ನಳೀನ್ ಕುಮಾರ್ ಕಟೀಲ್
ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷದಿಂದ ಜಂಬೂ ಸವಾರಿ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿತ್ತು. ಈ ಬಾರಿ ಅರಮನೆ ಆವರಣ ದಾಟಿದ ಜಂಬೂ ಸವಾರಿ ರಾಜಪಥದಲ್ಲಿ ಸಾಗಿ ದಸರಾ ಮೆರಗು ಹೆಚ್ಚಿಸಿದೆ. ಸಾವಿರಾರು ಮಂದಿ ಕಣ್ತುಂಬಿಕೊಂಡು ಸಂತಸ ಪಡುತ್ತಿದ್ದಾರೆ. ಸುಮಾರು 25 ಸಾವಿರ ಜನಕ್ಕೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ಬಾರಿ ನೀರಿಕ್ಷೆಗೂ ಮೀರಿ ಜನ ಸೇರಿದ್ದಾರೆ. ಇದನ್ನೂ ಓದಿ: ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ವಿ.ಎಸ್ ಅಭಿಷೇಕ್ ನಾಯ್ಡು ರಾಜೀನಾಮೆ