ಮೈಸೂರು: ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ಇಸ್ರೋ) ಆಯೋಜಿಸಿರುವ ಯುವ ವಿಜ್ಞಾನಿ ಕಾರ್ಯಕ್ರಮಕ್ಕೆ ಮೈಸೂರು ಮೂಲದ ವಿದ್ಯಾರ್ಥಿಯೊಬ್ಬ ಆಯ್ಕೆಯಾಗಿದ್ದಾನೆ.
ದೇಶದಲ್ಲೇ ಮೊದಲ ಬಾರಿಗೆ ಇಸ್ರೋ ಆಯೋಜಿಸಿರುವ ಯುವ ವಿಜ್ಞಾನಿ ಕಾರ್ಯಕ್ರಮಕ್ಕೆ ಜವಾಹಾರ್ ಲಾಲ್ ನವೋದಯ ವಿದ್ಯಾಲಯದ ವಿದ್ಯಾರ್ಥಿ ಭರತೇಶ್ವರ್ ಆಯ್ಕೆ ಆಗಿದ್ದಾನೆ.
ಹೈಸ್ಕೂಲ್ ನಲ್ಲಿ ಮಕ್ಕಳ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಯ ಆಧಾರದ ಮೇಲೆ ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ಹಾಗೂ ತಂತ್ರಜ್ಞಾನಗಳ ಬಗ್ಗೆ ಜ್ಞಾನ ನೀಡುವುದು. ಅಲ್ಲದೆ ಈ ವಿಷಯದ ಬಗ್ಗೆ ಹಚ್ಚಿನ ಆಸಕ್ತಿ ಹುಟ್ಟಿಸುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.
ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಕುರಿತು ಮಾತನಾಡಿದ ಭರತೇಶ್, ದೇಶದ ವಿವಿಧೆಡೆಯಿಂದ ಸರಿ ಸುಮಾರು 108 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕದಿಂದ ಮೂವರಷ್ಟೇ ಆಯ್ಕೆಯಾಗಿದ್ದೇವೆ. ಇಂತಹ ಒಳ್ಳೆಯ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಳ್ಳಲು ಬಹಳ ಕುತೂಹಲಕಾರಿಯಾಗಿದ್ದೇನೆ. ಇತ್ತೀಚೆಗಷ್ಟೇ ನಾವು ಬೆಂಗಳೂರಿನಿಂದ ಶ್ರೀಹರಿಕೋಟಾಗೆ ಭೇಟಿ ನಿಡಿ ಇಸ್ರೋ ಮುಖ್ಯಸ್ಥ ಕೆ. ಸಿವನ್ ಅವರೊಂದಿಗೆ ಮಾತುಕತೆ ನಡೆಸಿದ್ದೆವು. ಈ ವೇಳೆ ಅವರು ಯುವ ಜನಾಂಗಕ್ಕೆ ಬೇಕಾದ ಕೆಲವೊಂದು ವಿಚಾರಗಳನ್ನು ಅರ್ಥಪೂರ್ಣವಾಗಿ ವಿವರಿಸಿದ್ದರು ಎಂದು ಭೇಟಿಯ ಅನುಭವವನ್ನು ಹಂಚಿಕೊಂಡಿದ್ದಾನೆ.