– ಮನೆಯವರು ಕೆಲಸ ಬಿಡು ಅಂತಿದ್ದಾರೆ
– ಸಮಾಜಕ್ಕೋಸ್ಕರ ಮಾಡೋ ಸೇವೆ ಬಿಡಲ್ಲ
ಮೈಸೂರು: ನನ್ನ ಮನೆಯವರು ಘಟನೆ ನಡೆದ ಬಳಿಕ ಕೆಲಸ ಬಿಡುವಂತೆ ಹೇಳುತ್ತಿದ್ದಾರೆ. ಆದರೆ ಇವರುಗಳಿಗೆ ಹೆದರಿಕೊಂಡು ನಾನು ಸಮಾಜಕ್ಕೋಸ್ಕರ ಮಾಡುವ ಕೆಲಸವನ್ನು ಬಿಡಲ್ಲ ಎಂದು ಆಶಾ ಕಾರ್ಯಕರ್ತೆ ಸುಮಯಾ ಫಿರ್ದೋಶ್ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾವು ಕೋವಿಡ್ 19 ಸರ್ವೆ ಮಾಡುತ್ತಿದ್ದೇವೆ. ಯಾರಿಗೆ ಕೊರೊನಾ ಲಕ್ಷಣಗಳಿವೆ ಎಂಬುದರ ಬಗ್ಗೆ ಸರ್ವೆ ಮಾಡುತ್ತಿದ್ದೇವೆ. ಸರ್ವೆಯಲ್ಲಿ ಮನೆಯ ಯಜಮಾನನ ಹೆಸರು, ಅವರ ಕುಟುಂಬದಲ್ಲಿರುವ ಸದಸ್ಯರ ಹೆಸರು, ಅವರ ಕಾಂಟ್ಯಾಕ್ಟ್ ನಂಬರ್ ತೆಗೆದುಕೊಳ್ಳುತ್ತೇವೆ. ಹಾಗೆಯೇ 60 ವರ್ಷ ದಾಟಿದವರು ಅವರ ಕುಟುಂಬದಲ್ಲಿದ್ದವರಿಗೆ ಯಾವುದಾದರೂ ಕಾಯಿಲೆ ಇದೆಯಾ?, ಇನ್ನು ಅದರಲ್ಲಿ ಬಿಪಿ, ಶುಗರ್ ಇದ್ದವರಿದ್ದರೆ ಅವರ ನಂಬರ್ ಕೂಡ ತೆಗೆದುಕೊಳ್ಳುತ್ತೇವೆ ಎಂದರು.
ನಮ್ಮ ಏರಿಯಾದಲ್ಲಿ ಜನ ತುಂಬಾನೇ ಸಹಕಾರ ನೀಡುತ್ತಾರೆ. ನನಗೆ ಆರು ವರ್ಷದ ಸರ್ವಿಸ್ ಇದೆ. ಆದರೆ ಇಂತಹ ಘಟನೆ ಯಾವತ್ತೂ ಆಗಿರಲಿಲ್ಲ. ಇದೇ ಮೊದಲ ಬಾರಿ ನನ್ನ ಮೇಲೆ ದೌರ್ಜನ್ಯ ನಡೆದಿದೆ ಎಂದು ಸುಮಯಾ ತನ್ನ ಅಳಲು ತೋಡಿಕೊಂಡಿದ್ದಾರೆ.
ಇಲ್ಲಿ ನನ್ನ ತಪ್ಪು ಏನಿಲ್ಲ. ನಾನು ಬರೀ ಮಾಸ್ಕ್ ಹಾಕಿಕೊಳ್ಳಿ ಹಾಗೆಯೇ ಅಂತರ ಕಾಯ್ದುಕೊಳ್ಳಿ ಅಂತ ಹೇಳಿದ ಅಷ್ಟೆ. ಅದನ್ನು ದೊಡ್ಡ ವಿಷಯವಾಗಿ ಮಾಡಿದ್ರು. ನನ್ನ ತಂದೆಯ ಬಳಿ ಹೋಗಿ ಗಲಾಟೆ ಮಾಡಿದ್ರು. ಈ ಹಿಂದೆಯೂ ಆರೋಪಿ ಖಲೀಲ್ ಎಂಬಾತ ನನ್ನ ಕೈಯಿಂದ ಫೋನ್ ಕಿತ್ಕೊಂಡು ಗಲಾಟೆ ಮಾಡಿದ್ದನು. ಆಗ ನಾನು ಯಾರಿಗೂ ಹೇಳಿರಲಿಲ್ಲ. ಇಂತಹ ಘಟನೆಗಳು ನಡೆಯುತ್ತಲೇ ಇವೆ ಎಂದು ಸುಮ್ಮನಾಗಿದ್ದೆ. ಆದರೆ ನಿನ್ನೆ ನಡೆದ ಘಟನೆಯಿಂದ ನನಗೆ ನಿದ್ದೆನೇ ಬಂದಿಲ್ಲ. ಇಷ್ಟೆಲ್ಲಾ ಆದರೂ ನಾನು ಕೆಲಸ ಬಿಟ್ಟಿಲ್ಲ. ಈಗಲೂ ನಾನು ಫೀಲ್ಡ್ ನಲ್ಲಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಕಾಲದಲ್ಲಿ ಒಳ್ಳೆಯ ಕೆಲಸ ಮಾಡಿದಕ್ಕೋದ್ರೆ ಕೆಟ್ಟದು ಆಗುತ್ತೆ. ಇವರ ಆರೋಗ್ಯಕ್ಕೋಸ್ಕರ ನಾವು ಉರಿ ಬಿಸಿಲಲ್ಲಿ ಮನೆ ಮನೆ ಸುತ್ತುತ್ತಿದ್ದೇವೆ. ಆಗ ಇಂತಹ ಘಟನೆಗಳು ನಡೆದರೆ ಬೇಜಾರಾಗುತ್ತೆ, ಮನಸ್ಸಿಗೆ ನೋವಾಗುತ್ತದೆ. ಯಾವಾಗ ಜಿಲ್ಲೆಯಲ್ಲಿ ಹಕ್ಕಿ ಜ್ವರ ಬಂದಿದೆಯೋ ಅವತ್ತಿನಿಂದ ನಿರಂತರವಾಗಿ ನಾವು ಸರ್ವೆ ಕಾರ್ಯ ಮಾಡುತ್ತಲೇ ಇದ್ದೇವೆ. ಇಲ್ಲಿಯವರೆಗೆ ಸುಮಾರು 600 ಮನೆ ಸರ್ವೆ ಮಾಡಿದ್ದೇವೆ ಎಂದರು.
ಈ ಘಟನೆಯ ನಂತರ ಮನೆಯವರು ಕೆಲಸ ಬಿಟ್ಟು ಬಿಡು, ಜೀವ ಹೋದರೆ ಏನು ಮಾಡೋದು ಅಂತ ಹೇಳಿದ್ರು. ಪ್ರಾಣ ಹೋದರೂ ಪರವಾಗಿಲ್ಲ. ಆದರೆ ನಾನು ಕೆಲಸ ಬಿಡಲ್ಲ. ಇವರುಗಳಿಗೆ ಹೆದರಿಕೊಂಡು ನಾನು ಯಾಕೆ ಕೆಲಸ ಬಿಡಲಿ. ನಾವು ಜನರ ಸೇವೆ ಮಾಡುತ್ತಿದ್ದೇವೆ. ಇಲ್ಲಿ ತುಂಬಾ ಬಡವರು ಕೂಡ ಇದ್ದಾರೆ. ಈ ಕೋವಿಡ್ 19 ಸರ್ವೆಯಲ್ಲಿ ಯಾರ ಮನೆಯಲ್ಲಿ ಕಷ್ಟ ಇದೆ ಅಂತ ಗೊತ್ತಾಗುತ್ತಿದೆ. ಕೆಲವರು ಪರಿಸ್ಥಿತಿ ಹೇಗಿದೆ ಅಂತ ಕೇಳಿದ ತಕ್ಷಣ ಅಳುತ್ತಾರೆ ಎಂದು ತಿಳಿಸಿದರು.