ಮೈಸೂರು: ಭಾರತದ ಕಾನೂನಿಗೆ ಗೌರವ ಕೊಡದ ಮೇಲೆ ಅವರೆಲ್ಲ ಯಾಕೆ ಭಾರತದಲ್ಲಿ ಇರಬೇಕು ಎಂದು ಮಾಜಿ ಸಚಿವ ಎ.ಮಂಜು ಪೌರತ್ವ ಕಾಯ್ದೆ ತಿದ್ದುಪಡಿ ಪ್ರತಿಭಟನೆಯಲ್ಲಿ ಸೆಕ್ಷನ್ 144 ಅನ್ನು ಉಲ್ಲಂಘಿಸಿದವರನ್ನು ಪ್ರಶ್ನಿಸಿದರು.
ಮೈಸೂರಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಎಲ್ಲಿಯತನಕ ನಾವು ಭಾರತದ ಕಾನೂನನ್ನು ಗೌರವಿಸುದಿಲ್ಲವೋ ಅಲ್ಲಿಯವರೆಗೆ ನಾವು ಭಾರತೀಯರು ಅನ್ನೋದಕ್ಕೆ ಅನ್ಫಿಟ್. ಮಂಗಳೂರು ಗಲಭೆ ಪೂರ್ವ ನಿಯೋಜಿತ ಘಟನೆ. ಇದರ ನೈತಿಕ ಹೊಣೆಯನ್ನ ವಿರೋಧ ಪಕ್ಷಗಳೇ ಹೊರಬೇಕು ಎಂದು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.
ವಿರೋಧ ಪಕ್ಷದವರು ಜನರನ್ನ ಪ್ರಚೋದನೆ ಮಾಡಿ ಗಲಭೆಗೆ ಕಾರಣರಾಗಿದ್ದಾರೆ. ರಮೇಶ್ ಕುಮಾರ್ರಿಂದ ಇದನ್ನ ನಾನು ನೀರಿಕ್ಷೆ ಮಾಡಿರಲಿಲ್ಲ. ವಿರೋಧ ಪಕ್ಷಗಳು ಎಲ್ಲವನ್ನು ವಿರೋಧ ಮಾಡ್ತಿದ್ದಾರೆ. ಮಾಜಿ ಸಿಎಂಗಳು ಸುಖಾಸುಮ್ಮನೆ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಪೊಲೀಸರು ಮೊದಲು ಗುಂಡು ಹೊಡೆದಿಲ್ಲ. ಅವರಿಗೆ ಕಲ್ಲು ಬಿದ್ದ ಮೇಲೆಯೇ ಗುಂಡು ಹೊಡೆದಿದ್ದಾರೆ. ಕುಮಾರಸ್ವಾಮಿ ಓರ್ವ ಅಪಕ್ವ ರಾಜಕಾರಣಿ. ಅನುಭವ ಇಲ್ಲದೆ ಮುಖ್ಯಮಂತ್ರಿಯಾದ್ರೆ ಹೀಗೆ ಮಾತನಾಡೋದು ಎಂದು ಟೀಕಿಸಿದರು.
ಇವರೆಲ್ಲ ಬಿಜೆಪಿಯನ್ನು ವಿರೋಧ ಮಾಡುವ ಸಲುವಾಗಿ ಕಾಯ್ದೆ ವಿರೋಧಿಸುತ್ತಿದ್ದಾರೆ. ಕಾಯ್ದೆ ಬಗ್ಗೆ ಸುಪ್ರೀಂ ತೀರ್ಪು ಕೊಟ್ಟ ಮೇಲೆ ಚರ್ಚೆ ಮಾಡಲಿ. ಅದಕ್ಕೂ ಮುಂಚೆ ಯಾಕೆ ಪ್ರತಿಭಟನೆ ಮಾಡಬೇಕು ಎಂದು ಪ್ರಶ್ನಿಸಿದರು.