– ‘ಮಿಸ್ಟರ್ ತಮಿಳು ಹಾಸನ್’ ಎಂದು ಕರೆದ ಹಂಸಲೇಖ
ನೀವು ಕ್ಷಮೆ ಕೇಳಿದರೆ ಕ್ಷಮಾ ಹಾಸನ್ ಆಗುತ್ತೀರಿ. ಇಲ್ಲ ಅಂದ್ರೆ ಆ ಹಾಸನ್ ಆಗುತ್ತೀರಿ ಎಂದು ಕಮಲ್ ಹಾಸನ್ (Kamal Haasan)ವಿವಾದಾತ್ಮಕ ಹೇಳಿಕೆಗೆ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಕಿಡಿಕಾರಿದ್ದಾರೆ.
ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂಬ ನಟ ಕಮಲ್ ಹಾಸನ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕಮಲ್ ಹಾಸನ್ ಅವರನ್ನು ‘ಮಿಸ್ಟರ್ ತಮಿಳು ಹಾಸನ್’ ಎಂದು ಕರೆದರು. ತಮಿಳು ಮುಖ್ಯಮಂತ್ರಿ ಸ್ಟಾಲಿನ್ ಅವರು ಇಡೀ ದಕ್ಷಿಣ ಭಾರತವನ್ನು ಒಂದುಗೂಡಿಸಬೇಕು ಎಂಬ ಆಶಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಕನಸು ಕಟ್ಟುತ್ತಿದ್ದಾರೆ. ತೆಂಕಣವನ್ನು ಕಟ್ಟಬೇಕು ಅನ್ನೋದು ಸ್ಟಾಲಿನ್ ಕನಸು. ಅವರ ಕನಸಿಗೆ ಕಮಲ್ ಮಾತು ಸಹಾಯ ಮಾಡಬೇಕಿತ್ತು. ನೀವು ಆ ಪಕ್ಷದ ಮಿತ್ರ ಪಕ್ಷ. ನೀವು ಒಳ್ಳೆಯ ಮಾತುಗಳನ್ನು ಆಡಬೇಕು. ಯೋಚಿಸಿ ಮಾತಾಡಬೇಕು ಎಂದರು. ಇದನ್ನೂ ಓದಿ: ಕಮಲ್ ಹಾಸನ್ ಪರ ಬ್ಯಾಟ್ ಬೀಸಿದ ರಮ್ಯಾ – ಸಿನಿಮಾ ಬಹಿಷ್ಕರಿಸುವುದು ಸ್ವಲ್ಪ ಜಾಸ್ತಿ ಆಯ್ತು ಅಲ್ಲವೇ? ಎಂದ ನಟಿ
ನಾನು ಕನ್ನಡಿಗರು, ಭಾಷಾ ಪ್ರಿಯರು. ಭಾಷಾ ಅಂಧತೆ ನಮಗಿಲ್ಲ. ನಮ್ಮ ಕನ್ನಡ ದೇಶದ ಸಾಂಸ್ಕೃತಿ ರಾಯಭಾರಿ ಬಸವಣ್ಣ. ಬಸವಣ್ಣ ನಮಗೆ ಕೊಟ್ಟಿದ್ದು ವಚನಗಳು. ನಾವು ವಚನಗಳಿಗೆ ಯಜಮಾನರು. ವಚನಗಳು ಅಂದರೆ ಮಾತು ಸ್ವಾಮಿ. ಮಾತು ಎಚ್ಚರಿಕೆಯಿಂದ ಆಡಬೇಕು ಎಂದು ಹೇಳಿದರು. ಇದನ್ನೂ ಓದಿ: ನಟ ಕಮಲ್ ಹಾಸನ್ ಕ್ಷಮೆಯಾಚನೆಗೆ ಆಗ್ರಹ – ಫಿಲಂ ಚೇಂಬರ್ಗೆ ಕರವೇ ಮುತ್ತಿಗೆ
ತಮಿಳಿಗೆ ಲಿಪಿಯನ್ನು ಕೊಟ್ಟಿದ್ದು ಕನ್ನಡ ಭಾಷೆ ಎಂದು ವಿದ್ವಾಂಸರು ಹೇಳುತ್ತಾರೆ. ಅದರ ಬಗ್ಗೆ ಸ್ವಲ್ಪ ವಿಚಾರಿಸಿ ನೋಡಿ. ನಾವು ಕಲಾವಿದರು, ತೆಂಕಣವನ್ನು ಕಟ್ಟುವ ಕನಸು ಹೊತ್ತವರು. ಎಲ್ಲರೂ ಒಟ್ಟಾಗಿ ಬದುಕಬೇಕು ಅನ್ನುವ ಭಾರತಿಯರು. ಹಾಗಾಗಿ ನೀವು ದಯವಿಟ್ಟು ಕ್ಷಮೆ ಕೇಳಿ, ಏನೂ ತಪ್ಪಿಲ್ಲ. ನೀವು ಕ್ಷಮೆ ಕೇಳಿದ್ರೆ ಕ್ಷಮಾ ಹಾಸನ್ ಆಗುತ್ತೀರಿ. ಇಲ್ಲ ಅಂದ್ರೆ ಆ ಹಾಸನ್ ಆಗುತ್ತೀರಿ. ಆ ಹಾಸನ್ನಲ್ಲಿ ಮತಾಂಧತೆ, ಭಾಷಾಂಧತೆ ಅನ್ನುವ ಕೊಳೆತ, ಕೊಳಕು ಬೀಜಗಳು ಇವೆ ಅನ್ನೋ ಅನುಮಾನ ಇದೆ ಎಂದರು. ಇದನ್ನೂ ಓದಿ: ಬಹಿರಂಗವಾಗಿ ಕ್ಷಮೆ ಕೇಳದಿದ್ರೆ ಕಮಲ್ ಸಿನಿಮಾ ರಿಲೀಸ್ ಮಾಡೋಕೆ ಅವಕಾಶ ಕೊಡಲ್ಲ: ಸಾರಾ ಗೋವಿಂದು