ಬೆಂಗಳೂರು: ಮುರುಘಾ ಶ್ರೀಗಳ ವಿಚಾರದಲ್ಲಿ ನ್ಯಾಯಯುತ ತನಿಖೆ ಆಗಿ ಸತ್ಯ ಹೊರಗೆ ಬರಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ತಿಳಿಸಿದ್ದಾರೆ.
ಶ್ರೀಗಳ ಬಂಧನ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮುರುಘಾ ಶ್ರೀ ಬಂಧನ ಆಗಿದೆ. ಸತ್ಯಾಸತ್ಯತೆ ಹೊರಗಡೆ ಬರಲಿ. ವಿಚಾರ ಏನಿದೆ, ಮಕ್ಕಳು ಏನು ಹೇಳಿಕೆ ಕೊಟ್ಟಿದ್ದಾರೆ ವಿಚಾರಣೆ ಆಗಲಿ. ಬಸವರಾಜ್ ಮತ್ತು ಅವರ ಪತ್ನಿಯ ಪಾತ್ರ ಏನಿದೆ ಎಂಬುದರ ತನಿಖೆ ಆಗಲಿ. ಇದೆಲ್ಲದರ ಬಗ್ಗೆ ಸಂಪೂರ್ಣ ತನಿಖೆಯಾಗಲಿ ಎಂದರು.
ಬಾಲಕಿಯರ ಬಗ್ಗೆ ಮಾತನಾಡುವುದಕ್ಕೂ, ಮುರುಘಾ ಶ್ರೀಗಳ ಬಗ್ಗೆ ಮಾತನಾಡುವುದಕ್ಕೂ ವ್ಯತ್ಯಾಸ ಇದೆ. ಇವರು ಇಂದು ಪರಿವರ್ತನೆ ಮಾಡುತ್ತಾ, ಅಡ್ಡಪಲ್ಲಕಿ ಮಾಡಿಸಿಕೊಳ್ಳದೆ ಇರುವ ಸ್ವಾಮೀಜಿಯವರು. ದಲಿತರು, ಹಿಂದುಳಿದವರ ಸ್ವಾಮಿಗಳನ್ನಾಗಿ ಮಾಡಿದವರು. ಹೀಗಾಗಿ ಸತ್ಯಾಸತ್ಯತೆ ಹೊರಗಡೆ ಬರಬೇಕು. ತಪ್ಪು ಮಾಡಿದ್ದಾರೋ ಇಲ್ಲವೋ ಕೂಲಂಕುಶವಾಗಿ ತನಿಖೆ ಆಗಬೇಕು ಎಂದು ಹೇಳಿದರು. ಇದನ್ನೂ ಓದಿ: ಮುರುಘಾ ಶ್ರೀಗಳ ಬಂಧನ ಪ್ರಕರಣ – ಸರ್ಕಾರ ಕಾನೂನಾತ್ಮಕವಾಗಿ ತನಿಖೆ ಮಾಡಲಿ: ಕುಮಾರಸ್ವಾಮಿ
ಸರ್ಕಾರ ವಿಚಾರಣೆ ಮಾಡಿದೆ. ಸತ್ಯಾಸತ್ಯತೆ ಜನರ ಮುಂದೆ ತರುವುದು ಅವಶ್ಯಕತೆ ಇದೆ. 3 ವರ್ಷಗಳಿಂದ ಹೀಗೆ ಆಗ್ತಾ ಇದೆ ಅಂತ ಮಾಹಿತಿ ಇದೆ. ತುಂಬಾ ಹಳೆ ಇತಿಹಾಸ ಇರುವ ಮಠ ಇದು. 3 ಸಾವಿರ ಶಾಖೆ ಮಠಗಳು ಇವೆ. ಈ ಮಠಕ್ಕೆ ಪರಂಪರೆಗೆ ಕಳಂಕ ಬರಬಾರದು. ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆ ಆಗಲಿ ಎಂದರು.
ಲೆಹರ್ ಸಿಂಗ್ ಅವರು ಹೊರ ರಾಜ್ಯದವರಿಗೆ ತನಿಖೆ ನಡೆಸಲು ನೀಡಿ ಎಂದು ಹೇಳಿದ್ದಾರೆ. ನಿಮಗೆ ಅಷ್ಟು ಅನುಮಾನ ಇದ್ದರೆ ಸಿಬಿಐಗೆ ಕೊಡಿ. ಇಲ್ಲಿ ಯಾರನ್ನೂ ಉಳಿಸಬೇಕಿಲ್ಲ. ಸತ್ಯ ಗೊತ್ತಾಗಬೇಕು ಎಂದು ಆಗ್ರಹಿಸಿದರು.
ಬಸವರಾಜ್ ಅಲ್ಲಿ ಇದ್ದು, ಪೀಠಾಧಿಪತಿ ಆಗಬೇಕಿದ್ದವರು. ಆದರೆ ಅವರು ಲವ್ ಮ್ಯಾರೇಜ್ ಆಗಿ ಹೋದರು. ಆಡಳಿತ ಅಧಿಕಾರಿ ಆದರು. ಅಲ್ಲಿ ಹೋಗಿ ಎಂಎಲ್ಎ ಆದರು. ಮತ್ತೆ ಪುನಃ ಮಠದಲ್ಲಿ ಸೇರಿಕೊಂಡರು. ಮೊನ್ನೆ ರಾಹುಲ್ ಗಾಂಧಿ ಹೋಗಿದ್ದು ನೋಡಿದ್ದೆ, ಬೇರೆ ಗೊತ್ತಿಲ್ಲ ಎಂದರು. ಇದನ್ನೂ ಓದಿ: 60 ವರ್ಷ ವಯಸ್ಸಾಗಿದ್ದು, ಹೃದಯ ತುಂಬಾ ಸೂಕ್ಷ್ಮವಾಗಿದ್ರಿಂದ ಪ್ರಾಬ್ಲಂ ಬರೋದು ಸಹಜ: ಡಾ. ರಂಗನಾಥ್
ನಮಗೆ ಸ್ವಾಮಿಗಳಿಗಿಂತ ಪೀಠ ದೊಡ್ಡದು. ಆ ಪೀಠ ಭಾರೀ ದೊಡ್ಡದು. ಸುಮಾರು ವರ್ಷಗಳ ಇತಿಹಾಸ ಇರುವ ಪೀಠ. ಬಸವ ತತ್ವ ಸಾರಿರುವ ಪೀಠ. ಪೀಠಕ್ಕೆ ಕಳಂಕ ಬರಬಾರದು ಅಷ್ಟೆ ಅಂತ ಮನವಿ ಮಾಡಿದರು.