ಬೆಂಗಳೂರು: ಚುನಾವಣೆಯಲ್ಲಿ ನಾನು ಗೆದ್ದರೆ 24 ಗಂಟೆಯಲ್ಲಿ ಮಂತ್ರಿ ಆಗ್ತೀನಿ. ಬೇರೆ ಅಭ್ಯರ್ಥಿಗಳು ಗೆದ್ದರೆ ಏನು ಆಗಲ್ಲ. ಹಾಗಾಗಿ ಮತದಾರರು ನನಗೆ ಮತ ಹಾಕುತ್ತಾರೆ ಎಂದು ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಎಂಟಿಬಿ ನಾಗರಾಜ್, ಎರಡು ದಿನಗಳಿಂದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದೇನೆ. ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ನಿನ್ನೆ ನಡೆದ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ನಾನು ಗೆದ್ದರೆ ಮಂತ್ರಿ ಮಾಡ್ತೀನಿ ಅಂದಿದ್ದಾರೆ. ಮಂತ್ರಿಯಾದ್ರೆ ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರವಿದೆ. ಹಾಗಾಗಿ ಅಭಿವೃದ್ಧಿ ಕೆಲಸಗಳು ಆಗಲಿವೆ. ಇನ್ನುಳಿದ ಅಭ್ಯರ್ಥಿಗಳು ಗೆದ್ರೆ ಏನು ಆಗಲ್ಲ ಎಂದರು.
ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ಹೊಸಕೋಟೆ ಕ್ಷೇತ್ರಕ್ಕೆ ಏನು ಮಾಡಿದ್ದಾರೆ. ತಾಲೂಕಿನಲ್ಲಿ ಒಂದು ಬೋರ್ವೆಲ್ ಸಹ ಹಾಕಿಲ್ಲ. ನನ್ನ ಕಾಲಾವಧಿಯಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿದೆ. ಪ್ರಚಾರಕ್ಕೆ ಹೋದಾಗ ಜನರು ಸಹ ನಿಮ್ಮನ್ನು ಮತ್ತೊಮ್ಮೆ ಗೆಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಹಾಗಾಗಿ ಚುನಾವಣೆಯಲ್ಲಿ ನಾನೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.