ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರು ಪಬ್ಲಿಕ್ ಟಿವಿ ಮೂಲಕ ಬಹಿರಂಗವಾಗಿ ಸವಾಲೆಸೆದಿದ್ದಾರೆ.
ಸಿದ್ದರಾಮಯ್ಯ ಅವರನ್ನು ನಿಮ್ಮ ಚಾನೆಲ್ ಗೆ ಕರೆಸಿ ನಾನೂ ಬರುತ್ತೇನೆ. ಕುರುಬ ಸಮುದಾಯಕ್ಕೆ ಅವರು ಏನೂ ಮಾಡಿಲ್ಲ. ಅಲ್ಲದೇ ಅವರೇ ಕುರುಬ ಸಮುದಾಯವನ್ನು ಹಾಳು ಮಾಡಿದ್ದಾರೆ. ಸಿದ್ದರಾಮಯ್ಯ ಯಾವ ಸೀಮೆ ನಾಯಕ..?. ಅವರು ಎಲ್ಲರೂ ನನ್ನ ಕೈ ಕೆಳಗೆ ಇರಬೇಕು ಅಂತ ಬಯಸೋ ನಾಯಕರಾಗಿದ್ದಾರೆ. ತಾಕತ್ತಿದ್ದರೆ ಸಿದ್ದರಾಮಯ್ಯ ನನ್ನ ಜೊತೆ ಚರ್ಚೆಗೆ ಮುಂದಾಗಲಿ ಎಂದು ಪಬ್ಲಿಕ್ ಟಿವಿ ಮೂಲಕ ಪಂಥಾಹ್ವಾನ ನೀಡಿದ್ದಾರೆ.
ನಮ್ಮ ಸಮುದಾಯವನ್ನ ಹಾಳು ಮಾಡಿದ್ದೆ ಸಿದ್ದರಾಮಯ್ಯ. ಎಲ್ಲರೂ ನನ್ನ ಕೈ ಕೆಳಗೆ ಇರಬೇಕು, ಎರಡನೇ ಹಂತದ ನಾಯಕರಾಗೆ ಇರಬೇಕು ಅಂತ ನಮ್ಮನ್ನ ತುಳಿದರು. 5 ವರ್ಷ ಮುಖ್ಯಮಂತ್ರಿ ಆದರು. ಸಮುದಾಯಕ್ಕೆ ಒಂದು ಮೆಡಿಕಲ್ ಕಾಲೇಜು ಮಾಡಿಕೊಡಲಿಲ್ಲ ಎಂದು ಕಿಡಿಕಾರಿದರು.
5 ವರ್ಷ ಮುಖ್ಯಮಂತ್ರಿ ಆಗಿ ಒಬ್ಬನೇ ಒಬ್ಬ ಕುರುಬ ಸಮುದಾಯದವರನ್ನ ಸಚಿವರನ್ನಾಗಿ ಮಾಡಲಿಲ್ಲ. ದೇವೇಗೌಡರು ಸಿಎಂ ಆಗಿದ್ದಾಗ 6 ಮಂದಿ ಒಕ್ಕಲಿಗರು ಸಚಿವರಾಗಿದ್ದರು. ಎಸ್.ಎಂ ಕೃಷ್ಣ ಸರ್ಕಾರದಲ್ಲಿ ಎಂಟು ಜನ ಒಕ್ಕಲಿಗರು ಸಚಿವರಾದರು. ವೀರೆಂದ್ರ ಪಾಟೀಲ್ 5 ಜನ ಲಿಂಗಾಯತರನ್ನ ಸಚಿವರನ್ನಾಗಿ ಮಾಡಿದ್ರು ಇವರೇನು ಮಾಡಿದ್ರು ಎಂದು ಮರು ಪ್ರಶ್ನೆ ಮಾಡಿದರು.
ನನ್ನ ಸೋಲಿಸೋಕೆ ಸಿದ್ದರಾಮಯ್ಯ ಕೈಯಲ್ಲಿ ಆಗಲ್ಲ. ಬದಲಾಗಿ ಅವರೇ 36 ಸಾವಿರ ಮತಗಳಿಂದ ಸೋತರು. ಬಾದಾಮಿಯಲ್ಲಿ 600 ವೋಟ್ ಕಡಿಮೆ ಆಗಿದ್ದರೆ ಅಲ್ಲೂ ಸೋಲುತ್ತಿದ್ದರು. ಕಾಂಗ್ರೆಸ್ ಮುಳುಗಿ ಹೋಗಿದೆ. ನರೇಂದ್ರ ಮೋದಿಯವರು ಪ್ರಧಾನಿ ಆಗಿರುವಷ್ಟು ವರ್ಷ ದೇಶದಲ್ಲಿ ಕಾಂಗ್ರೆಸ್ಸಿಗೆ ನೆಲೆ ಇಲ್ಲ. ಪ್ರಾದೇಶಿಕ ಪಕ್ಷಗಳಿಗೂ ನೆಲೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಬಚ್ಚೇ ಗೌಡರು ಪಕ್ಷದ ಸಿಂಬಲ್ ನಿಂದ ಗೆದ್ದಿದ್ದಾರೆ. ಪಕ್ಷದಲ್ಲಿ ಮುಂದುವರಿಯಬೇಕು ಅಂದರೆ ನಮ್ಮ ಜೊತೆ ಬರುತ್ತಾರೆ. ಇಲ್ಲ ಅಂದ್ರೆ ಮುಂದೆ ಗೊತ್ತಾಗುತ್ತದೆ ಎಂದರು.
ಸದ್ಯ ಕಣ್ಣು ನೋವಿನಿಂದ ಬಳಲುತ್ತಿರುವ ಎಂಟಿಬಿ ನಾಗರಾಜ್, ಹೊಸಕೋಟೆಯ ಜಿಇಎಫ್ ಐ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದಾರೆ.