ಬೆಂಗಳೂರು: ನಗರದ ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆರಂಭದಲ್ಲಿಯೇ ಕ್ಯಾತೆ ತೆಗೆದಿದ್ದಾರೆ. ತೇಜಸ್ವಿ ಸೂರ್ಯರ ಈ ನಡೆಗೆ ಬಿಜೆಪಿಯ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಹೌದು. ತನ್ನ ರಾಜಕೀಯ ಗುರು, ಕೇಂದ್ರದ ಮಾಜಿ ಸಚಿವ ಅನಂತ್ ಕುಮಾರ್ ಬಳಸುತ್ತಿದ್ದ ಸಂಸದರ ಕಚೇರಿ ಬದಲಿಗೆ ಹೊಸ ಕಚೇರಿ ನೀಡಿ ಎಂದು ಬಿಬಿಎಂಪಿ ಕಮಿಷನರ್ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ತೇಜಸ್ವಿ ಪತ್ರ ಬರೆದಿದ್ದಾರೆ.
ಎಂಡ್ ಸರ್ಕಲ್ನಲ್ಲಿ ಅನಂತ ಕುಮಾರ್ ಅವರಿಗೆ ಸಂಸದರ ಕಚೇರಿಯನ್ನು ಪಾಲಿಕೆ ನೀಡಿತ್ತು. ಈ ಕಚೇರಿ ಈಗ ನನಗೆ ಬೇಡ. ಜಯನಗರದ ಶಾಲಿನಿ ಗ್ರೌಂಡ್ಸ್ ಎದುರಿನ ಪಾಲಿಕೆಯ ಕಟ್ಟಡದಲ್ಲಿ ಕಚೇರಿ ನೀಡಿ ಎಂದು ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ತೇಜಸ್ವಿ ಸೂರ್ಯ ಪತ್ರ ಬರೆದಿದ್ದಾರೆ. ನೂತನ ಯುವ ಸಂಸದನ ಈ ವರ್ತನೆಗೆ ಅನಂತ್ ಕುಮಾರ್ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ.
ಸಂಸದ ತೇಜಸ್ವಿ ಸೂರ್ಯರ ಪತ್ರಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್, ಪಾಲಿಕೆಗೆ ಕಚೇರಿ ನೀಡುವ ಅಧಿಕಾರ ನಮಗೆ ಇರುವುದಿಲ್ಲ. ಸಂಸದರು, ರಾಜ್ಯಸಭಾ ಸದಸ್ಯರಿಗೆ ರಾಜ್ಯ ಸರ್ಕಾರವೇ ಕಚೇರಿಯನ್ನು ನೀಡುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ಸಂಪರ್ಕಕ್ಕೆ, ದಿವಂಗತ ಅನಂತ್ ಕುಮಾರ್ ಸುಮಾರು ವರ್ಷಗಳಿಂದ ಇದೇ ಕಚೇರಿಯನ್ನ ಬಳಸುತ್ತಿದ್ದರು. ಆದರೆ ತಮ್ಮ ರಾಜಕೀಯ ಗುರುವಿನ ಕಚೇರಿಯನ್ನೇ ತೇಜಸ್ವಿ ಸೂರ್ಯ ತಿರಸ್ಕರಿಸಿದ್ದಾರೆ. ಸಂಸದರ ಈ ನಡೆ, ಅನಂತ್ ಕುಮಾರ್ ಅಭಿಮಾನಿಗಳಲ್ಲಿ ತೀವ್ರ ಬೇಸರ ತರಿಸಿದೆ.