ಮೈಸೂರು: ಇಷ್ಟು ದಿನ ಕಾಂಗ್ರೆಸ್ನವರು 40% ಕಮಿಷನ್ (40 Percent Commission) ಅಂತಾ ಬೊಬ್ಬೆ ಹೊಡೆದುಕೊಳ್ತಿದ್ರು, ಈಗ ಅಧಿಕಾರವೇ ಅವರ ಕೈಯಲ್ಲಿದೆ. ಎಲ್ಲವನ್ನ ತನಿಖೆ ಮಾಡಿಸಿ, ಬಿಜೆಪಿಯವರೇ ತಪ್ಪು ಮಾಡಿದ್ರೂ ಹಿಡಿದು ಜೈಲಿಗೆ ಹಾಕಿಸಿ. ನೀವು ಸತ್ಯ ಸಂಧರು ಅನ್ನೋದನ್ನ ಸಾಬೀತು ಮಾಡಿಕೊಳ್ಳಿ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಕುಟುಕಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ಹಗರಣ, ಬಿಟ್ ಕಾಯಿನ್ ಪ್ರಕರಣ, 40% ಕಮಿಷನ್ ಹಗರಣ, ಚಾಮರಾಜನಗರ ಆಕ್ಸಿಜನ್ ದುರಂತ ಎಲ್ಲರದ ಬಗ್ಗೆ ತನಿಖೆ ಮಾಡಿ. ಅವನ್ಯಾವನು ತಪ್ಪು ಮಾಡಿದ್ದಾನೋ, ಅವನನ್ನ ಹಿಡಿದು ಜೈಲಿಗೆ ಹಾಕಿ. ನೀವು ಸತ್ಯ ಸಂಧರು ಎಂಬುದನ್ನ ಪ್ರೂವ್ ಮಾಡಿ. ನೀವು ತನಿಖೆ ಮಾಡಿದ್ರೆ ನಮ್ಮ ಪಕ್ಷವನ್ನೂ ಸ್ವಚ್ಛಗೊಳಿಸೋದಕ್ಕೆ ಅನುಕೂಲವಾಗುತ್ತೆ ಎಂದಿದ್ದಾರೆ.
ನೀವು ಬಿಜೆಪಿ ಸರ್ಕಾರದ (BJP Government) ಮೇಲೆ ಏನೇನು ಆರೋಪ ಮಾಡಿದ್ದೀರೊ ಅವೆಲ್ಲದರ ಬಗ್ಗೆಯೂ ತುರ್ತು ತನಿಖೆ ಮಾಡಿ. ನಿಮ್ಮ ಮೇಲೆ ಜನ ಅತೀವ ವಿಶ್ವಾಸ ಇಟ್ಟಿದ್ದಾರೆ. ಆ ವಿಶ್ವಾಸವನ್ನ ಉಳಿಸಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.
ಎಲ್ಲರಿಗೂ ಫ್ರೀ ಅಂದಿದ್ದು ಸಿದ್ದರಾಮಯ್ಯ:
ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ಗ್ಯಾರಂಟಿ ಯೋಜನೆ ಘೋಷಣೆ ಮಾಡುವಾಗ ಯಾವ ಕಂಡಿಷನ್ ಹಾಕಿರಲಿಲ್ಲ. ನನಗೂ ಫ್ರೀ, ನಿನಗೂ, ಎಲ್ಲರಿಗೂ ಫ್ರೀ ಎಂದವರು ಸಿದ್ದರಾಮಯ್ಯ, ಈಗಲೂ ಯಾವ ಕಂಡಿಷನ್ ಇಲ್ಲದೇ ಗ್ಯಾರಂಟಿ (Congress Guarantee) ಜಾರಿ ಮಾಡಿ. ಅವರು ಆಡಿದ ಮಾತುಗಳೇ ಅವರ ತಲೆ ಮೇಲೆ ಒತ್ತಡ ತಂದಿದೆ. ಆ ಒತ್ತಡವನ್ನ ಅವರೇ ನಿಭಾಯಿಸಿಕೊಂಡು ಯಾವ ಷರತ್ತುಗಳಿಲ್ಲದೇ ಗ್ಯಾರಂಟಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.