ನವದೆಹಲಿ: ಲೋಕಸಭೆಯಲ್ಲಿ (Loksabha) ಸಂಸದರಿಗೆ ರಕ್ಷಣೆ ಇಲ್ಲ. ಇನ್ನು ಬೇರೆಯವರಿಗೆ ರಕ್ಷಣೆ ಹೇಗೆ ಎಂದು ಪ್ರಶ್ನೆ ಮಾಡಿದೆವು. ನಿಯಮಗಳನ್ನು ಗಾಳಿಗೆ ತೂರಿ ಅಮಾನತು ಮಾಡಿದರು. ಇದೊಂದು ದುರ್ದೈವದ ಸಂಗತಿ ಎಂದು ಸಂಸದ ಡಿ.ಕೆ ಸುರೇಶ್ (DK Suresh) ವಾಗ್ದಾಳಿ ನಡೆಸಿದರು.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ದೇವಸ್ಥಾನದೊಳಗೆ ಕೆಲವರು ಅಕ್ರಮವಾಗಿ ದಾಳಿ ಮಾಡಿದ್ದಾರೆ. ಭದ್ರತಾ ಲೋಪದ ಬಗ್ಗೆ ಕೇಂದ್ರ ಗೃಹ ಸಚಿವರು ಹಾಗೂ ಪ್ರಧಾನಮಂತ್ರಿಗಳು ಮಾತನಾಡಬೇಕು. ಮತ್ತು ತನಿಖೆಯಲ್ಲಿ ಪಾಸ್ ನೀಡಿದವರನ್ನು ಒಳಪಡಿಸಬೇಕು ಎಂದು ಆಗ್ರಹಿಸಿದ್ದೇವೆ ಎಂದರು.
ನಾವು ಮಾತನಾಡಲು ಸೂಕ್ತವಾದ ಅವಕಾಶ ಕೇಳಿದ್ದೆವು. ಮಾತನಾಡುವ ಹಕ್ಕನ್ನು ಕಸಿಯುವ ಪ್ರಯತ್ನ ಲೋಕಸಭೆಯಲ್ಲಿ ಮಾಡಲಾಗುತ್ತಿದೆ. ಇದನ್ನು ಖಂಡಿಸಿ ಬಾವಿಗಿಳಿದು ಪ್ರತಿಭಟನೆ ನಡೆಸಿದೆವು. ಇದಕ್ಕೆ ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನಲೆ ಇಂದು ಮೂವರನ್ನು ಅಮಾನತು ಮಾಡಿದೆ. ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬ ಸದಸ್ಯನ ಹಕ್ಕು. ಅದನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಕಿಡಿಕಾರಿದರು.
ಆಡಳಿತ ಪಕ್ಷದವರು ತಮ್ಮ ಅನುಕೂಲಕ್ಕೆ ತಕ್ಕಂತೆ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಹಿಂದೆ ಬಿಜೆಪಿ ನಾಯಕರು ಪ್ಲೆಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದ್ದರು. ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟು ಜನರನ್ನು ಅಮಾನತು ಮಾಡಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ಹಿಂದೆ ನಮ್ಮನ್ನು ವ್ಯಂಗ್ಯ ಮಾಡುವಾಗ ಬಿಜೆಪಿ ನಾಯಕರು ಎಂಜಾಯ್ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಡಿ.ಕೆ.ಸುರೇಶ್ ಸೇರಿ ಮತ್ತೆ ಮೂವರು ಸಂಸದರು ಲೋಕಸಭೆಯಿಂದ ಅಮಾನತು
ವಿಧಾನಸಭೆಯಲ್ಲಿ ಕುಮಾರಸ್ವಾಮಿ (HD Kumaraswamy) ಅವರು ನಾಯಕರು. ಈ ವಿಚಾರ ಅಲ್ಲಿ ಪ್ರಸ್ತಾಪ ಮಾಡಬೇಕು. ರಾಜ್ಯ ವಿಧಾನಸಭೆಯಲ್ಲಿ ವ್ಯಕ್ತಿಯೊಬ್ಬ ಬಂದು ಸುಮ್ನೆ ಕೂತು ಹೋಗಿದ್ದರು. ಆದರೆ ಭಯ ಬೀತಿ ಸೃಷ್ಟಿ ಮಾಡಿರಲಿಲ್ಲ. ಹೊಸ ಸಂಸತ್ ಸುಭದ್ರ ವಾಗಿದೆ ಎಂದಿದ್ದರು. ಆದರೆ ನಾಲ್ಕು ಜನರು ಭದ್ರತೆಯನ್ನು ಭೇಧಿಸಿದ್ದಾರೆ. ಕುಮಾರಸ್ವಾಮಿ ಗಂಟೆಗೊಂದು ಸಲ ಮಾತನಾಡುತ್ತಾರೆ. ಯಾವ್ಯಾಗವಗ ಏನ್ ಮಾತನಾಡುತ್ತಾರೆ ಗೊತ್ತಿದೆ. ಈ ಘಟನೆಯಲ್ಲಿ ವಿಪಕ್ಷ ನಾಯಕರ ಪಾತ್ರ ಇದಿದ್ದರೇ ಸುಮ್ನೆ ಬಿಡ್ತಿದ್ದರಾ ಎಂದು ಪ್ರಶ್ನಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು ಕಾಂಗ್ರೆಸ್ (Congress) ಸೇರಿ ವಿಪಕ್ಷಗಳು ಹೋರಾಡುತ್ತಿದ್ದಾರೆ. ಆಡಳಿತ ಪಕ್ಷ ವಿಷಯಾಂತರ ಮಾಡುತ್ತಿದೆ. ದುರ್ಘಟನೆಯನ್ನು ಮರೆಸುವ ಪ್ರಯತ್ನ ಮಾಡುತ್ತಿದ್ದಾರೆ. ಘಟನೆ ಬಗ್ಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ದೇಶದ ಜನರಿಗೆ ಏನಾಗಿದೆ ಗೊತ್ತಾಗಬೇಕು ಎಂದರು.
ಬಿಜೆಪಿ ಜೆಡಿಎಸ್ ಮೈತ್ರಿ ಮಾತುಕತೆ ಕುರಿತು ಪ್ರತಿಕ್ರಿಯಿಸಿದ ಅವರು, ಮೌಲ್ಯಗಳನ್ನು ಗಾಳಿಗೆ ತೂರಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ವಿರೋಧ ಪಕ್ಷದ ಕೆಲಸ ಅವರು ಮಾಡುತ್ತಿದ್ದಾರೆ. ಕುಟುಂಬಕ್ಕೆ ಆಶೀರ್ವಾದ ಬೇಕಾಗಿತ್ತು ಅನಿಸುತ್ತೆ. ಅದಕ್ಕೆ ಹೋಗಿ ಮೋದಿ ಭೇಟಿಯಾಗಿದ್ದಾರೆ. ಕುಮಾರಸ್ವಾಮಿ ಅವರು ಎಲ್ಲೆ ಸ್ಪರ್ಧಿಸಿದರೂ ಸ್ವಾಗತ ಮಾಡುತ್ತೇವೆ. ನಾನು ರಾಜಕಾರಣಕ್ಕೆ ಬರಲು ಅವರೇ ದಾರಿ ತೋರಿದ್ದು. ಲೋಕಸಭೆಗೆ ಬರಲು ಅವರ ಪತ್ನಿಯೇ ಕಾರಣ. ಹೀಗಾಗಿ ಅವರು ಎಲ್ಲೇ ನಿಂತ್ರು ಸ್ವಾಗತ ಎಂದು ಹೇಳುವ ಕುಮಾರಸ್ವಾಮಿ ಲೋಕಸಭೆ ಸ್ಪರ್ಧೆಯನ್ನು ಸ್ವಾಗತಿಸಿದರು.