ಬೆಂಗಳೂರು: ರೋಗಿಯನ್ನು ಹೊತ್ತೊಯ್ಯುತ್ತಿದ್ದ 108 ಅಂಬುಲೆನ್ಸ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಅಂಬುಲೆನ್ಸ್ ಸುಟ್ಟು ಹೋದ ಘಟನೆ ಇಂದು ನಡೆದಿದೆ.
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿಗೆ ಹೊಂದಿಕೊಂಡಿರೋ ತಮಿಳುನಾಡಿನಲ್ಲಿ ಈ ನಡೆದಿದೆ. ಘಟನೆಯಿಂದ ಅಂಬುಲೆನ್ಸ್ ನಲ್ಲಿದ್ದ ರೋಗಿ ಸಂಬಂಧಿ ಹಾಗೂ ಸಿಬ್ಬಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೋಗನೇಕಲ್ ರಸ್ತೆಯ ಅಡುವೈ ಕುರುಚಿ ಗ್ರಾಮದಲ್ಲಿ ಬೆಳಗ್ಗೆ ರೋಗಿಯನ್ನು ಹೊತ್ತೊಯ್ಯುತ್ತಿದ್ದ 108 ಅಂಬುಲೆನ್ಸ್ ನಲ್ಲಿ ರಸ್ತೆ ಮಧ್ಯೆಯೇ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಅಂಬುಲೆನ್ಸ್ ನಲ್ಲಿದ್ದ ರೋಗಿ ಹಾಗೂ ಆತನ ಸಂಬಂಧಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಆತನನ್ನು ಬೇರೊಂದು ವಾಹನದಲ್ಲಿ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.
ಅಂಬುಲೆನ್ಸ್ ಚಾಲಕ ಹಾಗೂ ವೈದ್ಯಕೀಯ ಸಿಬ್ಬಂದಿ ಅವಘಡದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ವಾಹನ ಆಗಮಿಸಿ ಬೆಂಕಿ ನಂದಿಸಿದ್ದು ಅಷ್ಟರೊಳಗೆ ಅಂಬುಲೆನ್ಸ್ ಸಂಪೂರ್ಣ ಸುಟ್ಟು ಹೋಗಿತ್ತು.