ಚಿತ್ರದುರ್ಗ: ಅಪ್ಪ, ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ತಾಯಿಯೊಬ್ಬಳು ಮಗುವಿಗೆ ವಿಷವುಣಿಸಿ ತಾನು ಸಹ ಆತ್ಮಹತ್ಯೆಗೆ ಯತ್ನಿಸಿರುವ ಅಮಾನವೀಯ ಕೃತ್ಯ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.
ತುಮಕೂರು ನಗರದ ಲೋಕೇಶ್ ಎಂಬ ವ್ಯಕ್ತಿಯು ತನ್ನ ಪತ್ನಿಯಾದ ವನಿತಗೆ ಭಾರೀ ಕಿರುಕುಳ ನೀಡುತ್ತಿದ್ದರೆಂಬ ಆರೋಪ ಪತ್ನಿಯ ಸಂಬಂಧಿಗಳಿಂದ ಕೇಳಿಬಂದಿದೆ. ನಿರಂತರವಾಗಿ ಪತಿಯ ಅವಾಚ್ಯ ಮಾತುಗಳು ಹಾಗೂ ಮಾನಸಿಕ ಕಿರುಕುಳದಿಂದ ಮನನೊಂದ ವನಿತ ತನ್ನ ಮಗ ಚಾರ್ವಿತ್(4)ಗೆ ವಿಷವುಣಿಸಿದ ಬಳಿಕ ತಾನು ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ವನಿತಾ ಅವರ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಎವರ್ ಗ್ರೀನ್ ಹೀರೋಯಿನ್ ಸುಧಾರಾಣಿ ಇನ್ಮುಂದೆ ಡಾ.ಸುಧಾರಾಣಿ
ಕೋಪ ಹಾಗೂ ಅವಸರದ ಕೈಗೆ ಬುದ್ದಿ ಕೊಟ್ಟ ವನಿತ ತನ್ನ ಮಗುವಿಗೆ ವಿಷವುಣಿಸಿದ ಬಳಿಕ ತಾನು ವಿಷ ಸೇವಿಸಿ ಭಯದಿಂದ ತನ್ನ ತವರೂರಾದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋಡಿಹಳ್ಳಿ ಗ್ರಾಮಕ್ಕೆ ತೆರಳಿದ್ದಾರೆ. ಆಗ ಅವರ ಕುಟುಂಬಸ್ಥರು ತಕ್ಷಣ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದು, ಈ ವೇಳೆ ಚಾರ್ವಿತ್(4) ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಹಾಗೂ ಡೆಲ್ಟಾ ವೈರಸ್ ನಡುವಿನ ವ್ಯತ್ಯಾಸವೇನು?
ಸದ್ಯ ಗಂಭೀರವಾಗಿ ಅಸ್ವಸ್ಥರಾಗಿರುವ ವನಿತಾ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಏನು ಅರಿಯದ ಮುಗ್ಧ ಮಗು ಅಪ್ಪ ಅಮ್ಮನ ಜಗಳದಲ್ಲಿ ಬಲಿಯಾಗಿರುವುದು ಮಾತ್ರ ವಿಪರ್ಯಾಸ. ಈ ಪ್ರಕರಣ ಚಿತ್ರದುರ್ಗ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.