ರಾಯ್ಪುರ: ಕುಡಿಯುವುದಕ್ಕೆ ಹಣ ನೀಡಲಿಲ್ಲ ಎಂದು ಪಾಪಿ ಮಗನೊಬ್ಬ ತಾಯಿಯನ್ನು ಕೊಲೆ ಮಾಡಿ ಆಕೆಯ ಮೆದುಳನ್ನು ಫ್ರೈ ಮಾಡಿದ ಘನಘೋರ ಘಟನೆ ಛತ್ತೀಸ್ಗಢದ ಖಾರ್ಸಿ ಜಿಲ್ಲೆಯಲ್ಲಿ ನಡೆದಿದೆ.
ಸೀತಾರಾಮ್ ಒರಾನ್ ತಾಯಿಯನ್ನು ಕೊಂದ ಮಗ. ಸೀತಾರಾಮ್ ತನ್ನ ತಾಯಿ ಫುಲೋಬಾಯಿ ಜೊತೆ ವಾಸಿಸುತ್ತಿದ್ದನು. ಅಲ್ಲದೆ ಕುಡಿತದ ಚಟಕ್ಕೆ ಬಲಿಯಾಗಿದ್ದನು. ಸೀತಾರಾಮ್ ಮದ್ಯ ಸೇವಿಸಲು ತನ್ನ ತಾಯಿಯ ಬಳಿ ಹಣ ಕೇಳಿದ್ದನು. ಆದರೆ ತಾಯಿ ಹಣ ಕೊಡಲು ನಿರಾಕರಿಸಿದ್ದರು.
ತಾಯಿ ಹಣ ಕೊಡಲು ನಿರಾಕರಿಸಿದ್ದಕ್ಕೆ ಸೀತಾರಾಮ್ ಹರಿತವಾದ ವಸ್ತುವಿನಿಂದ ತನ್ನ ತಾಯಿಗೆ ಹೊಡೆದಿದ್ದಾನೆ. ನಂತರ ಆಕೆಯ ತಲೆ ಬುರುಡೆಯನ್ನು ತೆರೆದು ಮೆದುಳನ್ನು ಫ್ರೈ ಮಾಡಲು ಹಾಕಿದ್ದಾನೆ. ಆದರೆ ಸೀತಾರಾಮ್ ಆ ಮೆದುಳನ್ನು ತಿನ್ನುವ ಮೊದಲು ಅವರ ಕಿರಿಯ ಸಹೋದರನ ಪತ್ನಿ ಸ್ಥಳಕ್ಕೆ ಬಂದಿದ್ದಾರೆ. ಸಹೋದರನ ಪತ್ನಿಯನ್ನು ನೋಡುತ್ತಿದ್ದಂತೆ ಸೀತಾರಾಮ್ ಸ್ಥಳದಿಂದ ಪರಾರಿ ಆಗಿದ್ದಾನೆ.
ಸೀತಾರಾಮ್ ಕೃತ್ಯ ನೋಡಿದ ಮಹಿಳೆ ತನ್ನ ಪತಿಗೆ ಅತ್ತೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಇಬ್ಬರು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆತನನ್ನು ಹುಡುಕಾಡಲು ಶುರು ಮಾಡಿದ್ದಾರೆ. ಈ ವೇಳೆ ಸೀತಾರಾಮ್ ರಕ್ತ ಆಗಿರುವ ಬಟ್ಟೆಯಲ್ಲೇ ಯಾವುದೋ ಪ್ರದೇಶದಲ್ಲಿ ಅಡಗಿಕೊಂಡಿದ್ದನು. ಬಳಿಕ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾಗ ಆತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಸದ್ಯ ಪೊಲೀಸರು ಸೀತಾರಾಮ್ ವಿರುದ್ಧ ಐಪಿಸಿ ಸೆಕ್ಷನ್ ಅಡಿ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಸೀತಾರಾಮ್ ಕಿರಿಯ ಸಹೋದರ ಆತನನ್ನು ಮದ್ಯ ಸೇವಿಸಬೇಡ ಎಂದು ಹಲವು ಬಾರಿ ಹೇಳಿದ್ದಾರೆ. ಆದರೆ ಈ ವಿಷಯಕ್ಕಾಗಿ ಸೀತಾರಾಮ್ ತನ್ನ ಸಹೋದರನ ಬಳಿ ಜಗಳವಾಡುತ್ತಿದ್ದನು. ಹಾಗಾಗಿ ಕಿರಿಯ ಸಹೋದರ ಆ ಮನೆಯಿಂದ ಹೊರಗೆ ಬಂದು ಬೇರೆ ಮನೆಯಲ್ಲಿ ವಾಸಿಸುತ್ತಿದ್ದನು. ಅಲ್ಲದೆ ತನ್ನ ತಾಯಿಯನ್ನು ಸೀತಾರಾಮ್ ಜೊತೆಯಲ್ಲಿ ಬಿಟ್ಟು ಹೋಗಿದ್ದರು.