ಲಕ್ನೋ: ದರೋಡೆಯನ್ನು ವಿರೋಧಿಸಿದ್ದಕ್ಕೆ ತಾಯಿ ಮತ್ತು ಮಗಳನ್ನು ರೈಲಿನಿಂದ ಕೆಳಗೆ ತಳ್ಳಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮಾಥುರಾದಲ್ಲಿ ನಡೆದಿದೆ.
ದೆಹಲಿಯ ಶಹದಾರಾ ನಿವಾಸಿ ಮೀನಾ (55) ಮತ್ತು ಮಗಳು ಮನೀಶಾ (21) ಮೃತರು. ಇವರು ದೆಹಲಿಯಿಂದ ಕೋಟಾಗೆ ಪ್ರಯಾಣಿಸುತ್ತಿದ್ದರು. ಮೀನಾ ಮತ್ತು ಮನೀಶಾ ಜೊತೆ ಮಗ ಆಕಾಶ್ (23) ಕೂಡ ನಿಜಾಮುದ್ದೀನ್-ತಿರುವನಂತಪುರಂ ಸೆಂಟ್ರಲ್ ಎಸ್ಎಫ್ ಎಕ್ಸ್ ಪ್ರೆಸ್ (22634) ನಲ್ಲಿ ಪ್ರಯಾಣಿಸುತ್ತಿದ್ದರು. ಈ ಘಟನೆ ಅಜೈ ರೈಲ್ವೆ ನಿಲ್ದಾಣದ ಬಳಿ ನಡೆದಿದೆ ಎಂದು ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ತಿಳಿಸಿದೆ.
ಮನೀಶಾ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಾಗಿ ಕೋಚಿಂಗ್ ಇನ್ಸ್ಟಿಟ್ಯೂಟ್ನಲ್ಲಿ ಪ್ರವೇಶ ಪಡೆಯಬೇಕೆಂದು ಕೋಟಾಗೆ ತೆರಳುತ್ತಿದ್ದಳು. ಮುಂಜಾನೆ ಮೀನಾ ದರೋಡೆಕೋರರು ತನ್ನ ಬ್ಯಾಗನ್ನು ತೆಗೆದುಕೊಂಡು ಹೋಗುವುದನ್ನು ನೋಡಿದ್ದಾರೆ. ಅದನ್ನು ಮಗಳಿಗೆ ತಿಳಿಸಿದ್ದು, ಇಬ್ಬರು ದರೋಡೆಕೋರರಿಂದ ಬ್ಯಾಗನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ದರೋಡೆಕೋರಲ್ಲಿ ಓರ್ವ ತಾಯಿ-ಮಗಳನ್ನು ರೈಲಿನಿಂದ ತಳ್ಳಿದ್ದಾನೆ ಎಂದು ಆರ್ಪಿಎಫ್ ತಿಳಿಸಿದೆ.
ಬ್ಯಾಗ್ನಲ್ಲಿ ಮೊಬೈಲ್ ಫೋನ್, ಹಣ, ಕೋಚಿಂಗ್ ಮತ್ತು ಹಾಸ್ಟೆಲ್ ಶುಲ್ಕ ಜೊತೆಗೆ ಇತರ ಬೆಲೆಬಾಳುವ ವಸ್ತುಗಳು ಇದ್ದವು. ಆಕಾಶ್ ಎಚ್ಚರಕೊಂಡು ರೈಲನ್ನು ನಿಲ್ಲಿಸಲು ಚೈನ್ ಎಳೆದಿದ್ದಾನೆ. ಅದು ವೃಂದಾಬನ್ ರಸ್ತೆ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿದೆ. ತಕ್ಷಣ ಈ ಬಗ್ಗೆ ಆರ್ಪಿಎಫ್ಗೆ ವಿಷಯ ತಿಳಿಸಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಅಂಬುಲೆನ್ಸ್ ಹೋಗಿದೆ. ಆದರೆ ಅಷ್ಟರಲ್ಲಿಯೇ ತಾಯಿ-ಮಗಳು ಮೃತಪಟ್ಟಿದ್ದರು ಎಂದು ಆರ್ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದ್ಯಕ್ಕೆ ಆರೋಪಿಗಳ ವಿರುದ್ಧ ದರೋಡೆ ಮತ್ತು ಹತ್ಯೆ ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧಿಸಲು ಶೋಧಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.