– ಸರಣಿ ಅಪಘಾತಕ್ಕೆ 7 ಬಲಿ; ಸೂಲಿಬೆಲೆ ಠಾಣೆಯಲ್ಲಿ ಎಫ್ಐಆರ್
ಬೆಂಗಳೂರು: ಬದುಕಿ ಬಾಳಬೇಕಿದ್ದ, ಮನೆಗೆ ಆಧಾರ ಸ್ತಂಭವಾಗಿದ್ದ ಮಕ್ಕಳು ಬೀದಿ ಹೆಣವಾಗಿದ್ದಾರೆ. ಹೊಸಕೋಟೆ ಸರಣಿ ಅಪಘಾತದಲ್ಲಿ (Hoskote Accident) ಮೃತಪಟ್ಟವರೆಲ್ಲ 22 ರಿಂದ 30 ವರ್ಷ ವಯಸ್ಸಿನ ಯುವಕರಾಗಿದ್ದಾರೆ. ಮತ್ತೊಂದೆಡೆ ಮಕ್ಕಳನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಬೈಕ್ ಸವಾರ (Bike Rider) ಗಗನ್ ತನ್ನದಲ್ಲದ ತಪ್ಪಿಗೆ ಇಂದು ಸಾವಿನ ಮನೆ ಸೇರಿದ್ದಾನೆ. ದೇವನಹಳ್ಳಿ ತಾಲೂಕಿನ ದೇವನಾಯಕನಹಳ್ಳಿಯ 26 ವರ್ಷದ ಗಗನ್ ಕೆಲಸ ಮುಗಿಸಿ ಮನೆಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.

ತಂದೆ-ತಾಯಿಗೆ ಮೃತ ಗಗನ್ ಒಬ್ಬನೇ ಮಗ. ಗಗನ್ ತಾಯಿಗೆ ಕಣ್ಣು ಕಾಣಲ್ಲ. ಓದಿಕೊಂಡೇ ಹಾಪ್ ಕಾಮ್ಸ್ನಲ್ಲಿ (hopcoms) ಕೆಲಸ ಮಾಡುತ್ತಿದ್ದ ಗಗನ್, ಸಂಜೆ 5 ಗಂಟೆಗೆ ಹೋಗಿ ಬೆಳಗ್ಗಿನ ಜಾವ 3 ಗಂಟೆಗೆ ಬರ್ತಿದ್ದ. ನಿನ್ನೆ ರಾತ್ರಿ ಪಾಳಿಯಾಗಿದ್ದರಿಂದ ಕೆಲಸ ಮುಗಿಸಿಕೊಂಡು ಬರುವಾಗ ಈ ದುರಂತ ನಡೆದುಹೋಗಿದೆ.
ಮನೆಯ ಜವಬ್ದಾರಿ ಹೊತ್ತಿದ್ದ ಗಗನ್ ಇಲ್ಲದ ಮನೆಯಲ್ಲಿ ಈಗ ಸೂತಕದಛಾಯೆ. ಇನ್ನು, ಅಪಘಾತದಲ್ಲಿ ಸಾವನ್ನಪ್ಪಿದ ಅಯಾನ್ ಅಲಿ ತಂದೆ ತಾಯಿಗೆ ಒಬ್ಬನೇ ಮಗ. ಇದ್ದೊಬ್ಬ ಮಗನನ್ನ ಕಳೆದುಕೊಂಡ ತಾಯಿ ಕಣ್ಣೀರು ಹಾಕಿದ್ದಾರೆ.

ಭೀಕರ ಸರಣಿ ಅಪಘಾತಕ್ಕೆ 7 ಬಲಿ
ಬೆಂಗಳೂರು ಹೊರವಲಯ ಹೊಸಕೋಟೆ ಬಳಿ ಬೆಳ್ಳಂ ಬೆಳಗ್ಗೆ ಭೀಕರ ಸರಣಿ ಅಪಘಾತ ಸಂಭವಿದೆ. ಕ್ಯಾಂಟರ್, ಬೈಕ್ ಮತ್ತು ಕಾರಿನ ನಡುವಿನ ಸರಣಿ ಅಪಘಾತಕ್ಕೆ 7 ಜನ ಸ್ಥಳದಲ್ಲೆ ದುರ್ಮರಣ ಹೊಂದಿದ್ದಾರೆ. ಒಂದೇ ಕಾರಿನಲ್ಲಿದ್ದ ಆರು ಜನ ಹಾಗೂ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಹೊಸಕೋಟೆ ತಾಲೂಕಿನ ಎಂ ಸತ್ಯವರ ಗ್ರಾಮದ ಬಳಿ ಈ ಘಟನೆ ನಡೆದಿದೆ.
ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್
ಹೊಸಕೋಟೆಯಿಂದ ದೇವನಹಳ್ಳಿ ಕಡೆ ಅತಿವೇಗವಾಗಿ ಬರ್ತಿದ್ದ ಎಕ್ಸ್ಯುವಿ ಕಾರು, ಬೈಕ್ಗೆ ಡಿಕ್ಕಿಯಾಗಿ ನಂತರ ಡಿವೈಡರ್ಗೆ ಗುದ್ದಿ ಕ್ಯಾಂಟರ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ 26 ವರ್ಷದ ಗಗನ್ ಹಾಗೂ ಕಾರಿನಲ್ಲಿದ್ದವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಅಶ್ವಿನ್, ಅಯಾನ್ ಅಲಿ, ಭರತ್, ಅರ್ಹಾನ್, ಇತನ್ ಜಾರ್ಜ್ ಎಂದು ಗುರುತಿಸಲಾಗಿದೆ. ಆರ್ ವಿ ಹಾಗೂ ಸಿಎಮ್ ಆರ್ ಕಾಲೇಜು ವಿದ್ಯಾರ್ಥಿಗಳು ಎಂದು ಹೇಳಲಾಗ್ತಿದೆ. ಎಲ್ಲರು ಕೊತ್ತನೂರಿನ ನಿವಾಸಿಗಳಾಗಿದ್ದಾರೆ. ಘಟನೆ ಸಂಬಂಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

