ಬೆಳಗಾವಿ: ತಾಯಿ ಹಾಗೂ ಮಗನನ್ನು ಭೀಕರವಾಗಿ ಹತ್ಯೆಗೈದು ಶವವನ್ನು ರೈಲ್ವೇ ಹಳಿಗಳ ಮೇಲೆ ಬಿಸಾಡಿರುವ ಅಮಾನವೀಯ ಘಟನೆ ಬೆಳಗಾವಿಯ ನ್ಯೂ ಗಾಂಧಿನಗರ ಬಳಿ ನಡೆದಿದೆ.
ನ್ಯೂ ಗಾಂಧಿನಗರ ಬಳಿಯ ರೈಲ್ವೇ ಟ್ರ್ಯಾಕ್ನಲ್ಲಿ ಶವಗಳು ಪತ್ತೆಯಾಗಿವೆ. ರೇಣುಕಾ(35) ಹಾಗೂ ಲಕ್ಷಣ(8) ಮೃತ ದುರ್ದೈವಿಗಳು. ಗಂಡನೇ ರೈಲ್ವೇ ಹಳಿ ಪಕ್ಕದಲ್ಲಿ ಇಬ್ಬರನ್ನೂ ಕೊಲೆ ಮಾಡಿ ನಂತರ ಹಳಿಯ ಮೇಲೆ ಶವ ಬಿಸಾಡಿದ್ದಾನೆಂದು ಶಂಕಿಸಲಾಗಿದೆ.
ಮೂಲತಃ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೀರನೋಳಿ ಗ್ರಾಮದ ನಿವಾಸಿಯಾಗಿರುವ ರೇಣುಕಾ ಕುಟುಂಬ ಕಳೆದ ಹತ್ತು ವರ್ಷದಿಂದ ಬೆಳಗಾವಿಯ ಮಾರುತಿನಗರದಲ್ಲಿ ವಾಸಿಸುತ್ತಿತ್ತು. ತರಕಾರಿ ಮಾರಿಕೊಂಡು ಮಹಿಳೆ ಜೀವನ ನಡೆಸುತ್ತಿದ್ದರು. ಆದರೆ ಪತಿ ಯಲ್ಲಪ್ಪ ಕರಗುಪ್ಪಿ, ಪತ್ನಿ ಹಾಗೂ ಮಗನ ಹತ್ಯೆ ಮಾಡಿದ್ದಾನೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.
ಶವ ಬಿದ್ದಿರುವ ಹಳಿ ಪಕ್ಕದಲ್ಲಿ ರಕ್ತದ ಗುರುತು ಪತ್ತೆಯಾಗಿದೆ. ಇದರಿಂದ ಮೊದಲು ಕೊಲೆ ಮಾಡಿ ನಂತರ ಶವಗಳನ್ನ ಹಳಿ ಮೇಲೆ ಎಸೆಯಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನಾ ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.