ಶಿವಮೊಗ್ಗ: ಆರತಕ್ಷತೆಯ ಊಟ ಮಾಡಿದ ಸುಮಾರು 200ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಸಮೀಪದ ಜಯಂತಿ ಗ್ರಾಮದ ತಾಂಡದಲ್ಲಿ ನಡೆದಿದೆ.
ಅಸ್ವಸ್ಥಗೊಂಡವರಲ್ಲಿ 70 ಜನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಲ್ಲಿ ಇಬ್ಬರು ಮಕ್ಕಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ಶಿವಮೊಗ್ಗ ಗ್ರಾಮದ ಮಂಜಾನಾಯ್ಕ ಎಂಬವರ ಮದುವೆ ದಾವಣಗೆರೆಯಲ್ಲಿ ನಡೆದಿತ್ತು.
ಈ ಪ್ರಯುಕ್ತ ಗ್ರಾಮದಲ್ಲಿ ಆರತಕ್ಷತೆ ಇಟ್ಟುಕೊಳ್ಳಲಾಗಿತ್ತು. ಮೊದಲ ಒಂದು ಪಂಕ್ತಿಯ ನಂತರ ಊಟ ಮಾಡಿದ ಎಲ್ಲರೂ ಸ್ವಲ್ಪ ಸಮಯದಲ್ಲೇ ವಾಂತಿ- ಬೇಧಿ, ಹೊಟ್ಟೆನೋವು, ತಲೆಸುತ್ತು ಇತ್ಯಾದಿಗಳಿಂದ ಅಸ್ವಸ್ಥಗೊಂಡರು. ವಧು-ವರ ಕೂಡ ಅಸ್ವಸ್ಥಗೊಂಡು ನಿತ್ರಾಣರಾಗಿದ್ದಾರೆ. ತಕ್ಷಣವೇ ಅಸ್ವಸ್ಥರನ್ನು ಚನ್ನಗಿರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಸದ್ಯ ಮೆಗಾನ್ ಆಸ್ಪತ್ರೆಗೆ ದಾಖಲಾದವರು ಚೇತರಿಸಿಕೊಳ್ಳುತ್ತಿದ್ದಾರೆ ಎಂಬುವುದಾಗಿ ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ.