ಚಿಕ್ಕಬಳ್ಳಾಪುರ: ಶ್ರೀಲಂಕಾದಲ್ಲಿ ಉಗ್ರರು ನಡೆಸಿರುವ ಬಾಂಬ್ ಸ್ಫೋಟದಿಂದ ಪ್ರವಾಸಕ್ಕೆ ತೆರಳಿದ್ದ ರಾಜ್ಯದ 6 ಮಂದಿ ಮೃತಪಟ್ಟಿದ್ದು, ಮತ್ತೆ ಕೆಲವರು ನಾಪತ್ತೆಯಾಗಿದ್ದಾರೆ. ಇದೇ ವೇಳೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಬೆಂಗಳೂರಿನ 20ಕ್ಕೂ ಹೆಚ್ಚು ಮಂದಿ ಇಂದು ಸಂಜೆ ಕೊಲಂಬೋದಿಂದ ವಾಪಸ್ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಅಗಮಿಸಿದ್ದಾರೆ.
ಬೆಂಗಳೂರಿನ ವಿಜಯನಗರ, ಜಯನಗರ ಸೇರಿದಂತೆ ವಿವಿಧ ಕಡೆಯಿಂದ ಶ್ರೀಲಂಕಾದ ವಿವಿಧ ಭಾಗಗಳಿಗೆ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು ಬೆಂಗಳೂರಿಗೆ ವಾಪಸ್ಸಾಗಿದ್ದು ಕುಟುಂಬಸ್ಥರು ಸೇರಿದಂತೆ ಆತ್ಮೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರವಾಸಿಗರು ಮಾಧ್ಯಮಗಳೊಂದಿಗೆ ಮಾತನಾಡಿ, ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅದೊಂದು ಘೋರ ದುರಂತ, ಇಂತಹ ಕೃತ್ಯಗಳು ನಡೆಯಬಾರದಿತ್ತು ಎಂದು ಪ್ರವಾಸಿಗರು ದಾಳಿಯನ್ನ ಖಂಡಿಸಿದರು.
ನಾವು ಇದ್ದ ಸ್ವಲ್ಪ ದೂರದಲ್ಲೇ ಬ್ಲಾಸ್ಟ್ ಆಗಿತ್ತು, ಘಟನೆ ಬಳಿಕ ಶ್ರೀಲಂಕಾ ಸರ್ಕಾರ ನಿಷೇಧಾಜ್ಞೆ ಘೋಷಣೆ ಮಾಡಿತ್ತು. ಹೀಗಾಗಿ ವಿಮಾನದಲ್ಲಿ ಹೆಚ್ಚು ಭದ್ರತೆ ಕೈಗೊಂಡಿದ್ದ ಪರಿಣಾಮ ಎಲ್ಲವನ್ನೂ ಎದುರಿಸಿ ಬರಬೇಕಾಯಿತು. ನಮ್ಮ ಭಾರತದ ನೆಲಕ್ಕೆ ಬಂದಿಳಿದ ಮೇಲೆ ನಮಗೆ ಸಮಾಧಾನವಾಯಿತು ಎಂದು ಪ್ರವಾಸಿಗರು ತಿಳಿಸಿದ್ದಾರೆ.