ಬೆಂಗಳೂರು: ಕೊಡಗು ನಿರಾಶ್ರಿತರಿಗೆ ಟೆಂಟ್ ನಿರ್ಮಾಣ ಮಾಡಿಕೊಡುವ ಪ್ರಸ್ತಾವನೆ ಕೈ ಬಿಡಲಾಗಿದ್ದು, ಮನೆ ನಿರ್ಮಿಸುವವರೆಗೆ ಪ್ರತಿ ತಿಂಗಳು ಕುಟುಂಬಕ್ಕೆ 10 ಸಾವಿರ ರೂ. ಪರಿಹಾರ ಧನ ನೀಡಲಾಗುತ್ತದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಕೊಡಗು ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ 700-800 ಕುಟುಂಬಗಳು ಆಶ್ರಯ ಕಳೆದುಕೊಂಡಿದ್ದು, ಅವರನ್ನು ಗುರುತಿಸಲಾಗಿದೆ. ಜಿಲ್ಲಾಧಿಕಾರಿ ತಿಳಿಸುವ ಸ್ಥಳಗಳಲ್ಲಿ ತಲಾ 6 ಲಕ್ಷ ರೂ. ವೆಚ್ಚದಲ್ಲಿ ನಿರಾಶ್ರಿತರಿಗೆ ಮಾದರಿ ಮನೆಗಳನ್ನು ನಿರ್ಮಿಸಿಕೊಡಲಾಗುತ್ತದೆ ಎಂದರು.
ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆ ಪಡೆದು ಸೂಕ್ತ ಸಮಯದಲ್ಲಿ ದಾಖಲಾತಿ ಸಲ್ಲಿಸಿರಲಿಲ್ಲ ಹಾಗೂ ಹಣ ಪಾವತಿಸಿಲ್ಲ. ಹೀಗಾಗಿ 72,370 ಫಲಾನುಭವಿಗಳಿಗೆ ಮಂಜೂರಾತಿಯನ್ನು ತಡೆಹಿಡಿಯಲಾಗಿದೆ. 19 ಸಾವಿರ ಮಂದಿ ದಾಖಲೆಗಳನ್ನು ಸಲ್ಲಿಸಿದ್ದರೆ, ಸುಮಾರು 32 ಸಾವಿರ ಫಲಾನುಭವಿಗಳು ದಾಖಲೆಗಳನ್ನು ಸಲ್ಲಿಸಿಲ್ಲ. ಇಲ್ಲಿಯವರೆಗೆ ದಾಖಲೆಗಳನ್ನು ಸಲ್ಲಿಸದ ಫಲಾನುಭವಿಗಳಿಗೆ ಅಕ್ಟೋಬರ್ 15ರ ವರಗೆ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ. ಅವರು ಗ್ರಾಮ ಪಂಚಾಯ್ತಿ ಪಿಡಿಓಗಳ ಮೂಲಕವೇ ದಾಖಲೆಗಳನ್ನು ಅಪ್ಲೋಡ್ ಮಾಡಿಸಬೇಕು ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv