ರಾಮನಗರ: ಮಾಜಿ ಪ್ರಧಾನಿ ದೇವೇಗೌಡರ ಬಹಿರಂಗ ಸಭೆಗೆ ಕಾರ್ಯಕರ್ತರ ಬರವೇ ಎನ್ನುವ ಪ್ರಶ್ನೆ ಇಂದು ರಾಮನಗರದ ಬಹಿರಂಗ ಸಮಾವೇಶದ ವೇಳೆ ಮೂಡಿತ್ತು.
ಏಕೆಂದರೆ ಇಂದು ರಾಮನಗರ ಕ್ಷೇತ್ರದಲ್ಲಿ ದೇವೇಗೌಡರ ಪ್ರಚಾರ ಸಭೆಗೆ ಕಾರ್ಯಕರ್ತರನ್ನ ಕರೆತರಲು ಜೆಡಿಎಸ್, ಕಾಂಗ್ರೆಸ್ ಪಕ್ಷದ ಮುಖಂಡರು ಹಣ ಹಂಚಿಕೆ ಮಾಡಿದ್ದಾರೆ.
ಕ್ಷೇತ್ರದ ಕೊಳ್ಳಿಗಾನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಬಹಿರಂಗ ಪ್ರಚಾರ ಸಭೆಯನ್ನು ಇಂದು ಆಯೋಜಿಸಲಾಗಿತ್ತು. ಸಭೆಗೆ ಮಾಜಿ ಪ್ರಧಾನಿ ದೇವೇಗೌಡ ಅವರು ಆಗಮಿಸಿ ಕಾರ್ಯರ್ತರನ್ನು ಉದ್ದೇಶಿಸಿ ಮಾತನಾಡಿ ಪಕ್ಷದ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ್ದರು.
ಈ ಬಹಿರಂಗ ಸಭೆಗೆ ಜನರನ್ನು ಕರೆತರಲು ಸ್ಥಳೀಯ ಮೈತ್ರಿಗೆ ಮಾಡಿಕೊಂಡಿರುವ ಜೆಡಿಎಸ್, ಕಾಂಗ್ರೆಸ್ ಮುಖಂಡರು ಸಭೆಗೆ ಬರುವ ಪ್ರತಿಯೊಬ್ಬರಿಗೂ ತಲಾ 150 ರೂ. ಹಂಚಿಕೆ ಮಾಡಿದ್ದಾರೆ. ಪಕ್ಷದ ಶಾಲು ಹಾಕಿಕೊಂಡಿದ್ದ ಮುಖಂಡರು ಜನರಿಗೆ ಹಣ ಹಂಚಿಕೆ ಮಾಡುತ್ತಿದ್ದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪ್ರಚಾರದ ವೇಳೆ ಹಾರೋಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್ಡಿಡಿ, ಬಿಜೆಪಿ ಆಡಳಿತದ ಬಗ್ಗೆ ನಾನು ಮಾತಾಡಿದ್ದೇನೆ. ಮೋದಿ, ಯಡಿಯೂರಪ್ಪ ಸೇರಿದಂತೆ ಯಾರ ಬಗ್ಗೆಯೂ ವೈಯಕ್ತಿಕ ವಿಚಾರ ಮಾತಾಡಲ್ಲ. ನನಗೆ 50 ವರ್ಷಗಳ ರಾಜಕೀಯ ಅನುಭವ ಇದ್ದು, ಯಾವ ರೀತಿ ಮಾತಾಡಬೇಕು ಎಂಬ ಅರಿವು ನನಗಿದೆ. ಬೇರೆಯವರು ಮಾತನಾಡಿದ್ದ ಬಗ್ಗೆಯೂ ನಾನು ಪ್ರತಿಕ್ರಿಯಿಸಲ್ಲ. ಬೇರೆಯವರ ಲೆವಲ್ ಗೆ ಇಳಿಸುವಂತೆ ನನ್ನನ್ನು ಮಾತನಾಡಿಸ ಬೇಡಿ. ದೇಶದ ಪ್ರಧಾನಿಯಾಗಿದ್ದವನು ನಾನು, ಆ ಘನತೆ ಉಳಿಸಬೇಕು ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv