– ರವೀಶ್.ಹೆಚ್.ಎಸ್, ಪೊಲಿಟಿಕಲ್ ಬ್ಯೂರೋ ಚೀಫ್, ಪಬ್ಲಿಕ್ ಟಿವಿ
ಬುಲ್ಡೋಜರ್ ಬಾಬಾ ಗುದ್ದೇಟಿಗೆ ‘ಸೈಕಲ್’ ಅಪ್ಪಚ್ಚಿ ಆಗೋಯ್ತು. ಹಳೆ ‘ಆನೆ’ ನೆಲಕಚ್ಚಿದ್ರೆ ಹಸ್ತಕ್ಕೆ ‘ಡಬಲ್’ ಡೋಸ್ ಕೊಟ್ಟಿದ್ದಾರೆ ಉತ್ತರಪ್ರದೇಶದ ಮತದಾರ. ಕಡೆಗೆ ಮೋದಿ-ಯೋಗಿ ಜೋಡಿ ತಂತ್ರ ಸಕ್ಸಸ್ ಆಗಿದೆ. ಹೌದು, ಅಯೋಧ್ಯೆಯ ಶ್ರೀರಾಮ, ಮಥುರೆಯ ಶ್ರೀಕೃಷ್ಣ, ಕಾಶಿಯ ವಿಶ್ವನಾಥ, ಗೋರಖ್ಪುರದ ಗೋರಖನಾಥ, ಈ ಜಪ-ತಪಗಳ ಕೃಪೆಯಿಂದ ಬಿಜೆಪಿ ಮತ್ತೆ ಗದ್ದುಗೆಯನ್ನೇರುವಂತೆ ಮಾಡಿದೆ. ಮೋದಿ-ಯೋಗಿ ಜೋಡಿ ಹುಲಿಗಳ ಸೋಶಿಯಲ್ ಎಂಜಿನಿಯರಿಂಗ್ ಸೂಜಿದಾರ ಸೂತ್ರ ಯಶಸ್ಸು ಕಂಡಿದೆ.
ಮಹಿಳಾ ಮತದಾರರನ್ನ ಭಾವಾನಾತ್ಮಕವಾಗಿ ಗೆದ್ದು, ಮೇಲ್ವರ್ಗದ ಜೊತೆಗೆ ಸಣ್ಣ ಸಣ್ಣ ಜಾತಿಗಳನ್ನ ಗುಡ್ಡೇ ಹಾಕಿ, ಹಿಂದೂತ್ವ ನಮ್ಮ ಹೃದಯ ಎಂಬುದನ್ನ ಮತದಾರನಲ್ಲಿ ನೆಲೆಗೊಳಿಸಿ ಕೇಸರಿ ಕಲಿಗಳು ಗೆದ್ದು ಬೀಗಿದ್ದಾರೆ. ಈ ಗೆಲುವಿನೊಂದಿಗೆ ಗ್ಯಾಸ್ ಸಿಲಿಂಡರ್ ಇಟ್ಕೊಂಡು ಬೆಲೆ ಏರಿಕೆ ಅಂತಾ ಸುತ್ತಾಡಿದ ಎಸ್ಪಿಯ ಸೈಕಲ್ ಅನ್ನು ಪಂಕ್ಚರ್ ಮಾಡಿದ್ರೆ, ನಿರುದ್ಯೋಗ ಅಂತಾ ಪ್ರಿಯಾಂಕಾ ಗಾಂಧಿ ಅಖಾಡಕ್ಕಿಳಿಸಿ ಓಡಾಡಿದ ಕೈಗೆ ಡಬ್ಬಲ್ ಡೋಸ್ ಕೊಟ್ಟು ಬಿಜೆಪಿ ಕಿಲಕಿಲ ನಕ್ಕಿದೆ.
ಉತ್ತರ ಪ್ರದೇಶದ ಇತಿಹಾಸದಲ್ಲೇ 37 ವರ್ಷಗಳ ಬಳಿಕ ಬಿಜೆಪಿ ದಾಖಲೆ ಬರೆದಿದೆ. ಸತತ ಎರಡನೇಯ ಬಾರಿ ಒಂದು ಪಕ್ಷ ಅಧಿಕಾರಕ್ಕೆ ಬಂದು ದಾಖಲೆ ಬರೆದಿದೆ. ಅಷ್ಟೇ ಅಲ್ಲ ಗೋವಿಂದ ವಲ್ಲಬ್ ಪಂತ್ರ ಬಳಿಕ, 61 ವರ್ಷಗಳ ನಂತ್ರ ಸತತ ಎರಡನೇಯ ಬಾರಿಗೆ ಸಿಎಂ ಆಗಿ ಅಧಿಕಾರ ಉಳಿಸಿಕೊಂಡವರ ಪಟ್ಟಿಯಲ್ಲಿ ಯೋಗಿ ಆದಿತ್ಯನಾಥ್ ಸೇರ್ಪಡೆಯಾಗಿರುವುದು ಕೂಡ ದಾಖಲೆಯಾಗಿದೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 250 ಸ್ಥಾನಗಳನ್ನ ಕ್ರಾಸ್ ಮಾಡಿ ನಗೆ ಬೀರಿದ್ರೆ, ಕಳೆದ ಬಾರಿಗಿಂತ 2% ಹೆಚ್ಚು ಮತಗಳನ್ನು ಪಡೆಯುವ ಮೂಲಕ ನಾವೇ ರಾಜಕುಮಾರರು ಅಂತಾ ಮೋದಿ-ಯೋಗಿ ವಿಕ್ಟರಿ ಸಿಂಬಲ್ ತೋರಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಅಭಿವೃದ್ಧಿ ಮಂತ್ರ ಪಠಣದ ಜೊತೆಗೆ ಗೂಂಡಾಗಿರಿ ನಿಯಂತ್ರಣಕ್ಕೆ ತಂದಿದ್ದನ್ನೇ ಯೋಗಿ ಆದಿತ್ಯನಾಥ್ ಮತದರಾನ ಮುಂದೆ ಎತ್ತಿ ತೋರಿಸಿದ್ರು. ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ವರ್ಚಸ್ಸು ಹೆಚ್ಚು ಕೆಲಸ ಮಾಡಿದೆ. ರಾಷ್ಟ್ರೀಯತೆಯ ಟ್ರಂಪ್ ಕಾರ್ಡ್, ಕಾಶಿ ಅಭಿವೃದ್ಧಿ, ಕಾರಿಡಾರ್ಗಳ ನಿರ್ಮಾಣ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮತದಾರನ ಮೇಲೆ ಪ್ರಭಾವ ಬೀರಿದೆ. ಇದರ ಜೊತೆಗೆ ಮಹಿಳಾ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುವಲ್ಲಿ ಬಿಜೆಪಿಯ ಎಲೆಕ್ಷನ್ ಮಿಷಿನ್ ರೂಪಿಸಿದ ತಂತ್ರ ಫಲಿಸಿದೆ. ಇದೆಲ್ಲದರ ಜೊತೆಗೆ ಹಿಜಬ್ ವಿಚಾರ ಕಡೆಯ ಕ್ಷಣಗಳಲ್ಲಿ ಅಲ್ಪ ಲಾಭ ಮಾಡಿಕೊಟ್ಟಿರುವ ಸಾಧ್ಯತೆಯ ಬಗ್ಗೆಯೂ ನಾನಾ ಲೆಕ್ಕಚಾರಗಳು ಜೋರಾಗಿಯೇ ನಡೆದಿದ್ದು, ದಲಿತ ಮತಗಳ ಜೊತೆ ಸಣ್ಣ-ಸಣ್ಣ ಮತಗಳನ್ನ ಪಡೆಯುವಲ್ಲಿ ಬಿಜೆಪಿ ಸಕ್ಸಸ್ ಆಗಿದೆ ಅಂದ್ರೂ ತಪ್ಪಾಗಲಾರದು.
ಒಟ್ನಲ್ಲಿ ಬಹುತೇಕ ಎಕ್ಸಿಟ್ ಪೋಲ್ ಸಮೀಕ್ಷೆಗಳನ್ನ ಉತ್ತರ ಪ್ರದೇಶ ಚುನಾವಣೆ ಫಲಿತಾಂಶ ನಿಜ ಮಾಡಿದೆ. ಉತ್ತರ ಪ್ರದೇಶ ಗೆದ್ದರೆ ದೇಶ ಗೆದ್ದಂತೆ ಎಂಬಂತೆ ಬಿಜೆಪಿ ಜೈಕಾರ ಹಾಕ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆದ್ದುಬೀಗಲು ನರೇಂದ್ರ ಮೋದಿಗೆ ನ್ಯಾಷನಲ್ ಫರ್ಮಿಟ್ ಸಿಕ್ಕಂತಾಗಿದೆ ಎಂಬದರ ಬಗ್ಗೆ ಲೆಕ್ಕಚಾರ ಶುರು ಆಗಿರೋದಂತೂ ಸತ್ಯ. ಉತ್ತರಪ್ರದೇಶ ಚುನಾವಣೆ ಗೆಲುವು ಮುಂದಿನ ಎಲೆಕ್ಷನ್ಗೆ ಬೂಸ್ಟರ್ ಟಾನಿಕ್ ಎಂದರೂ ತಪ್ಪಾಗಲಾರದು.