-ಕೇಳಿದ್ದು ಇಯರ್ ಫೋನ್, ಕದ್ದಿದ್ದು ದುಬಾರಿ ಮೊಬೈಲ್
ಬೆಂಗಳೂರು: ನೆಲಮಂಗಲ ಪಟ್ಟಣದ ಜಯನಗರದಲ್ಲಿ ಮೊಬೈಲ್ ಅಂಗಡಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ದುಬಾರಿ ಬೆಲೆಯ ಮೊಬೈಲ್ ಕಳ್ಳತನ ಮಾಡಿರುವ ಘಟನೆಯೊಂದು ನಡೆದಿದೆ. ಕಳ್ಳನ ಕರಾಮತ್ತು ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬುಧವಾರ ಸಂಜೆ 6.30ರ ಸುಮಾರಿಗೆ ಜಯನಗರದ ಲಾವಣ್ಯ ಮೊಬೈಲ್ಸ್ ಅಂಗಡಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಕಾಲೇಜು ಯುವಕನೊಬ್ಬ ಮೊಬೈಲ್ ಎಗರಿಸಿ ಕಾಲ್ಕಿತ್ತಿದ್ದಾನೆ. ಅಂಗಡಿಗೆ ಬಂದ ಕಳ್ಳ ಮೊದಲು ಇಯರ್ ಫೋನ್ ಕೇಳಿ, ಅಂಗಡಿಯಲ್ಲಿದ್ದವರ ಗಮನ ಬೆರೆಡೆ ಸೆಳೆಯುವಂತೆ ಮಾಡಿದ್ದಾನೆ. ಬಳಿಕ ಟೇಬಲ್ ಮೇಲಿದ್ದ ದುಬಾರಿ ಬೆಲೆಯ ಮೊಬೈಲ್ ಅನ್ನು ಕಳ್ಳತನ ಮಾಡಿ ಹೋಗಿದ್ದಾನೆ.
ಇತ್ತ ಮೊಬೈಲ್ ನಾಪತ್ತೆಯಾಗಿರುವುದನ್ನು ಅರಿತು, ಅಂಗಡಿಯಲ್ಲಿದ್ದ ಸಿಸಿಟಿವಿಯನ್ನು ಪರಿಶೀಲಿಸಿದಾಗ ಕಳ್ಳನ ಕರಾಮತ್ತು ಬಯಲಾಗಿದೆ. ಕೂಡಲೇ ಅಂಗಡಿ ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಂಗಡಿ ಮಾಲೀಕ ವರದರಾಜ್, ಕಾಲೇಜು ಹುಡುಗನ ವೇಷದಲ್ಲಿ ಬಂದಿದ್ದ ಕಳ್ಳನೊಬ್ಬ, ಇಯರ್ ಫೋನ್ ಕೇಳಿದ್ದ. ಬಳಿಕ ಅಂಗಡಿಯಲ್ಲೇ ಸುಮಾರು 20 ನಿಮಿಷ ನಿಂತಿದ್ದ. ತೆಲುಗು ಮಿಶ್ರಿತ ಕನ್ನಡ ಮಾತನಾಡುತ್ತಿದ್ದು, ಅಂಗಡಿಯಲ್ಲಿದ್ದವರ ಗಮನ ಬೆರೆಡೆ ಸೆಳೆದು ಮೊಬೈಲ್ ಕದ್ದು ಪರಾರಿಯಾಗಿದ್ದಾನೆ. ಕಳ್ಳನು ಓಜಿಕುಪ್ಪಂ ತಂಡದ ಸದಸ್ಯನೆಂದು ಅನುಮಾನ ಮೂಡುತ್ತಿದೆ ಎಂದು ಹೇಳಿದ್ದಾರೆ.
ಘಟನೆ ಸಂಬಂಧ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv