ತುಮಕೂರು: ಸಿಎಂ ಅವರದ್ದು ಕಣ್ಣೀರಿನ ರಾಜಕಾರಣವಾದರೆ ಡಿಸಿಎಂ ಅವರದ್ದು ಬಿಲ್ಡಪ್ ರಾಜಕಾರಣ ಎಂದು ಕುಮಾರಸ್ವಾಮಿ ಹಾಗೂ ಪರಮೇಶ್ವರ್ ವಿರುದ್ಧ ಬಿಜೆಪಿ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಹರಿಹಾಯ್ದಿದ್ದಾರೆ.
ತುಮಕೂರಿನಲ್ಲಿ ಬರ ಅಧ್ಯಯನ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೇಜಸ್ವಿನಿ ಅವರು, ಈ ಭಾಗದ ಎತ್ತಿನ ಹೊಳೆ ಯೋಜನೆಗೆ ನಿಗದಿಯಾದ ಹಣವೆಷ್ಟು? ವಿಳಂಬದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆದ ನಷ್ಟ ಎಷ್ಟು? ಸಮರೋಪಾದಿಯಲ್ಲಿ ಈ ನೀರಾವರಿ ಯೋಜನೆಗಳನ್ನ ಬರಪೀಡಿತ ಪ್ರದೇಶಗಳಲ್ಲಿ, ಮಳೆಯಿಲ್ಲದ ಪ್ರದೇಶದಲ್ಲಿ ಸರ್ಕಾರ ಯಾಕೆ ಮಾಡೋದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲದೆ ಸಿಎಂ ಮೊದಲು ಕಣ್ಣೀರಿನ ರಾಜಕಾರಣ, ಜಾತಿ ರಾಜಕಾರಣ, ಎತ್ತಿಕಟ್ಟುವ ರಾಜಕಾರಣ ಮಾಡ್ತಾರೆ. ಡಿಸಿಎಂ ಪರಮೇಶ್ವರ್ ಸಾಲು ಸಾಲು ವಾಹನಗಳನ್ನ ತಂದು ಬಿಲ್ಡಪ್ ರಾಜಕಾರಣ ಮಾಡ್ತಾರೆ. ಇದನ್ನೆಲ್ಲ ಬಿಟ್ಟು ಮೊದಲು ಜನರ ಬಗ್ಗೆ ಯೋಚಿಸಿ ಎಂದು ಹೇಳಿದ್ದಾರೆ. ಇನ್ನು ಎಷ್ಟು ಸಚಿವರು ಬರ ಪ್ರವಾಸ ಮಾಡಿದ್ದಾರೆ? ಕೃಷಿ ಸಚಿವರು ಎಲ್ಲಿದ್ದಾರೆ? ಬರಪೀಡಿತ 100 ತಾಲೂಕುಗಳಲ್ಲಿ ಹಸುಗಳೆಷ್ಟಿವೆ? ಮೇವು ಬ್ಯಾಂಕ್ ಎಲ್ಲಿ ಸ್ಥಾಪನೆ ಮಾಡಿದ್ದೀರಾ? ಜನರಿಗೆ ಹಾಗೂ ದನಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಎಲ್ಲಿ ಮಾಡುತ್ತೀರಿ ಎಂದು ಪ್ರಶ್ನಿಸಿ ಸಿಎಂ ಹಾಗೂ ಡಿಸಿಎಂ ವಿರುದ್ಧ ಕಿಡಿಕಾರಿದ್ದಾರೆ.
ಜನರ ಸಮಸ್ಯೆಯನ್ನು ಕಾರ್ಯಕ್ರಮಕ್ಕೆ ಆಗಮಿಸಿರುವ ಕೇಂದ್ರ ಸಚಿವ ರಮೇಶ್ ಜಿಗಜಿಗಣಿ ಅವರ ಬಳಿ ಹೇಳಿಕೊಳ್ಳಿ. ಕೇಂದ್ರದಿಂದ ಸಹಾಯ ಮಾಡಲು ನಾವು ಬದ್ಧರಿದ್ದೇವೆ ಎಂದು ಈ ವೇಳೆ ಜನರಿಗೆ ಭರವಸೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv