ರಾಮನಗರ: ನಾನು ಜೆಡಿಎಸ್ ಪಕ್ಷ ಬಿಡಲು ತೀರ್ಮಾನ ಮಾಡಿದ್ದೇನೆ. ಎಲ್ಲ ವಿಧಾನ ಪರಿಷತ್ ಸದಸ್ಯರೂ ಈ ಕುರಿತು ಆಲೋಚನೆ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಜೆಡಿಎಸ್ ಪಕ್ಷ ಬಿಡಲು ತೀರ್ಮಾನ ಮಾಡಿದ್ದೇನೆ. ಆದರೆ ಮುಂದಿನ ನಡೆ ಗೊತ್ತಿಲ್ಲ. 2-3 ಜನ ಹೊರತುಪಡಿಸಿದರೆ ಉಳಿದೆಲ್ಲ ಪರಿಷತ್ ಸದಸ್ಯರು ಈ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿದ್ದಾರೆ. ಎಲ್ಲರೂ ಸೇರಿ ತೀರ್ಮಾನ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದೇವೆ. ಜೆಡಿಎಸ್ ಬಿಡಲು ಕಾರಣ ಮುಂದಿನ ದಿನಗಳಲ್ಲಿ ಹೇಳುತ್ತೇವೆ. ಅದಕ್ಕೂ ಸಮಯ ಬರುತ್ತದೆ ಎಂದರು.
ನನ್ನ ಬೆನ್ನ ಹಿಂದೆ, ಶ್ರೇಯಸ್ಸಿನ ಹಿಂದೆ ನಿಂತಿರುವವರು ಶಿಕ್ಷಕರು, ಸ್ನೇಹಿತರು. ಅವರ ಜೊತೆಗೆ ಚರ್ಚೆ ಮಾಡಿ ನಾನು ನಿರ್ಧಾರ ಹೇಳುತ್ತೇನೆ. ನಿರ್ಧಾರ ನನ್ನದಾದರೂ ಶಿಕ್ಷಕರು ಸ್ನೇಹಿತರ ಜೊತೆ ಚರ್ಚೆ ಮಾಡಬೇಕು. ಹೀಗಾಗಿ ಮುಂದಿನ ದಿನಗಳಲ್ಲಿ ಕಾರಣ ತಿಳಿಸುತ್ತೇನೆ ಎಂದು ಹೇಳಿದರು.
ದೇವೇಗೌಡರು ಹಿರಿಯರು ಅವರ ಬಗ್ಗೆ ಗೌರವವಿದೆ. ಚಲುವರಾಯಸ್ವಾಮಿ ತೀರ್ಮಾನ ತೆಗೆದುಕೊಂಡು ಕಾಂಗ್ರೆಸ್ ಸೇರಿದ್ದಾರೆ. ಅಧಿಕಾರಾವಧಿ ಇರುವುದರಿಂದ ನಾವು ತೀರ್ಮಾನ ತೆಗೆದುಕೊಳ್ಳಲು 2020ರ ವರೆಗೆ ಸಮಯವಿದೆ. ಆದರೆ ಈಗ ಎಲ್ಲರೂ ಸೇರಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆವು. ಹೀಗಾಗಿ ಈಗಲೇ ಬಹುತೇಕ ಎಲ್ಲ ಎಂಎಲ್ಸಿಗಳೂ ಸೇರಿ ತೀರ್ಮಾನ ತೆಗೆದುಕೊಳ್ಳಬೇಕು ಎನ್ನುತ್ತಿದ್ದಾರೆ. ಈ ಕುರಿತು ಹೊರಟ್ಟಿಯವರು ಮಾತನಾಡಿದ್ದಾರೆ. ಇಂದು ಚರ್ಚೆ ಮಾಡೋಣ ಎಂದಿದ್ದರು. ನೀವು ತೀರ್ಮಾನ ಮಾಡಿ ನಾನು ಅದಕ್ಕೆ ಬದ್ಧ ಎಂದು ಹೇಳಿದ್ದೇನೆ ಎಂದರು.
ಹಾಲಿ ಎಂಎಲ್ಸಿಗಳು ಒಮ್ಮೆ ತೀರ್ಮಾನ ಮಾಡಿದ್ದಾರೆ ಮತ್ತೊಮ್ಮೆ ಸೇರಲು ನಿರ್ಧರಿಸಿದ್ದಾರೆ. ಕೆಲವರಿಗೆ ಯಾರಿಗೆ ನೋವಾದರೂ, ಯಾರು ಸತ್ತರೂ ಏನು ಅನಿಸುವುದಿಲ್ಲ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೆಸರನ್ನು ಹೇಳದೆ ಟಾಂಗ್ ನೀಡಿದರು.