ಮೈಸೂರು: ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ತಮ್ಮ ಹೆಸರಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ನನ್ನ ಹೆತ್ತವರಿಗೆ ಮೊದಲ ಮಗು ಸತ್ತು ಹೋಗಿತ್ತು. ಎರಡನೇ ಮಗು ಸಾವನ್ನಪ್ಪಬಾರದು ಅಂತಾ ನಮ್ಮಪ್ಪ ಹರಕೆ ಹೊತ್ತಿದ್ದರು. ಕಾಶಿಗೆ ಹೋಗಿ ಹರಕೆ ಹೊತ್ತಿದ್ದ ಕಾರಣ ನನಗೆ ಆ ಹೆಸರು ಇಟ್ಟರು ಎಂದರು.
ಕಾಶಿಯಲ್ಲಿ ಮೋಕ್ಷ ಪಡೆಯಲು ಎಲ್ಲರೂ ಹಂಬಲಿಸುತ್ತಾರೆ. ಮುಸ್ಲಿಮರಿಗೆ ಮೆಕ್ಕಾ ಇದ್ದಂತೆ ಕ್ರೈಸ್ತರಿಗೆ ರೋಮ್ ಇದ್ದಂತೆ. ಹಿಂದೂಗಳಿಗೆ ಕಾಶಿ ಪವಿತ್ರವಾದದ್ದು ಎಂದು ಹೇಳಿದರು. ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ 15 ಸೀಟ್ ಗೆಲುವು- ಬಿಎಸ್ವೈ ವಿಶ್ವಾಸ
ಇದೇ ವೇಳೆ ವಾರಣಾಸಿಯಲ್ಲಿ ವಿಶ್ವನಾಥ್ ಕಾರಿಡಾರ್ ನಿರ್ಮಾಣ ಸ್ವಾಗತಾರ್ಹ. ಆದರೆ ಕಾರ್ಯಕ್ರಮದಲ್ಲಿ ಒಂದು ಸಣ್ಣ ಲೋಪವಾಗಿದೆ. ವಾರಣಾಸಿಯನ್ನು ಬೇರೆ ಬೇರೆ ಧರ್ಮದವರು ನಾಶ ಮಾಡಿದ್ದರು. 16ನೇ ಶತಮಾನದಲ್ಲಿ ಉಳಿಸಿದ್ದು ಅಹಲ್ಯಬಾಯಿ. ಅವರೇ ಕಾಶಿ ವಿಶ್ವನಾಥ ದೇವಸ್ಥಾನ ಉಳಿಸಿದ್ದರು. ಯುದ್ಧದ ಬದಲು ಯುಕ್ತಿಯಿಂದ ಉಳಿಸಿದ್ದರು. ಶಿವನ ಹೆಸರಲ್ಲೇ ಅವರು ಆಡಳಿತ ಮಾಡಿದ್ದರು. ಇಂತಹ ಯುಕ್ತಿ ಪ್ರದರ್ಶಿಸಿದ ಅಹಲ್ಯಬಾಯಿ ಅವರನ್ನು ಎಲ್ಲರೂ ಮರೆತಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪ್ರಧಾನಿ ನರೇಂದ್ರ ಮೋದಿ ಸಹ ಮರೆತಿದ್ದಾರೆ ಎಂದು ಆರೋಪಿಸಿದರು.