ಚಿಕ್ಕಬಳ್ಳಾಪುರ: ಪುಟಗೋಸಿ ನಿಗಮ ಮಂಡಳಿ ಸ್ಥಾನವನ್ನು ನೀವು ತಪ್ಪಿಸಿರಬಹುದು ಆದ್ರೆ ನನ್ನ ಶಾಸಕ ಸ್ಥಾನವನ್ನು ಕಿತ್ತುಕೊಳ್ಳಲು ನಿಮ್ಮಿಂದ ಆಗಲ್ಲ. ಅದು ನಿಮ್ಮ ಹಣೆಬರಹದಲ್ಲೂ ಬರೆದಿಲ್ಲ ಎಂದು ಕಾಂಗ್ರೆಸ್ ಶಾಸಕ ಸುಧಾಕರ್ ಪರೋಕ್ಷವಾಗಿ ಜೆಡಿಎಸ್ ಪಕ್ಷ ಹಾಗೂ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಹನುಮಂತಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಪುಟಗೋಸಿ ನಿಗಮ ಮಂಡಳಿ ಸ್ಥಾನ ಯಾರಿಗೆ ಬೇಕು? ಅದನ್ನು ನೀವು ತಪ್ಪಿಸಿರಬಹುದು. ನನ್ನ ಶಾಸಕ ಸ್ಥಾನ ತಪ್ಪಿಸಲು ಸಾಧ್ಯನಾ? ನಿಮ್ಮ ಹಣೆಬರಹದಲ್ಲೂ ಆಗಲ್ಲ. ನಿಮ್ಮ ಕೈಯಲ್ಲೂ ಸಾಧ್ಯವಿಲ್ಲ. ನಾನು ಜೆಡಿಎಸ್ ಅಭ್ಯರ್ಥಿಯನ್ನ ಎರಡು ಬಾರಿ ಸೋಲಿಸಿದ್ದೇನೆ. ಜನರ ಆಶೀರ್ವಾದ ನನಗಿದೆ ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಅವರನ್ನು ಹೊಗಳಿದರೆ ಕೆಲವರಿಗೆ ಉರಿಯುತ್ತೆ. ಸಿದ್ದರಾಮಯ್ಯ ನಮ್ಮ ಸಿಎಂ ಅಂದರೆ ಕೆಲವರು ಮೈ ಪರಚಿಕೊಳ್ತಾರೆ. ಸಿದ್ದರಾಮಯ್ಯ ಅವರು ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರು ನಮ್ಮ ನೆಚ್ಚಿನ ನಾಯಕ. ನಮ್ಮ ನಾಯಕರನ್ನು ಹೊಗಳಿದರೆ ಕೆಲವರಿಗೆ ಅಗಲ್ಲ ಎಂದು ಮತ್ತೆ ಜೆಡಿಎಸ್ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದರು.
ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣಾ ಟಿಕೆಟ್ ಕಾಂಗ್ರೆಸ್ ಪಕ್ಷಕ್ಕೆ ನೀಡಬೇಕು. ಯಾವುದೇ ಕಾರಣಕ್ಕೂ ಜೆಡಿಎಸ್ಗೆ ನೀಡಬಾರದು. ಒಂದು ವೇಳೆ ನೀಡಿದರೆ ನಾವು ವಿರುದ್ಧವಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ಹೈಕಮಾಂಡಿಗೆ ಸುಧಾಕರ್ ಎಚ್ಚರಿಕೆ ಕೊಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv