ಬೆಂಗಳೂರು: ಯುವಕನೊಬ್ಬನ ಮೇಲೆ ನಡೆಸಿ ಪರಾರಿಯಾಗಿದ್ದ ಶಾಸಕ ಹ್ಯಾರಿಸ್ ಪುತ್ರ ಕೊನೆಗೂ ಪೊಲೀಸರ ಮುಂದೆ ಶರಣಾಗಿದ್ದಾನೆ.
ಶನಿವಾರ ರಾತ್ರಿ ಯುವಕನೊಬ್ಬನ ಜೊತೆ ಜಗಳವಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಬಳಿಕ ನಲಪಾಡ್ ಪಾರಾರಿಯಾಗಿದ್ದನು. ಆದ್ರೆ ಇಂದು ಬೆಳಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ಮುಂದೆ ಶರಣಾಗಿದ್ದಾನೆ.
ಸದ್ಯ ಘಟನೆಯಲ್ಲಿ ಗಂಭೀರ ಗಾಯಗೊಂಡ ಯುವಕ ವಿದ್ವತ್ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಮಗನನ್ನು ನಾನೇ ಸರೆಂಡರ್ ಮಾಡಿಸ್ತೇನೆ- ಪೊಲೀಸರು ಬರ್ತಿದ್ದಂತೆ ಕಥೆ ಕಟ್ಟಿದ ಶಾಸಕ ಹ್ಯಾರಿಸ್
ಏನಿದು ಘಟನೆ?: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಊಟ ಮಾಡುವ ವಿಷಯಕ್ಕಾಗಿ ಕಿರಿಕ್ ತೆಗೆದು ಯುವಕನೋರ್ವನ ಮೇಲೆ ಹಲ್ಲೆ ನಡೆಸಿದ್ದಾನೆ. ಉದ್ಯಮಿ ಲೋಕ್ನಾಥ್ ಪುತ್ರ ವಿದ್ವತ್ ಹಲ್ಲೆಗೊಳಗಾದ ಯುವಕನಾಗಿದ್ದು, ಇವರು ಇತ್ತೀಚೆಗೆ ವಿದ್ವತ್ ಸಿಂಗಾಪೂರ್ನಲ್ಲಿ ಪದವಿ ಮುಗಿಸಿ ನಗರಕ್ಕೆ ಆಗಮಿಸಿದ್ದರು. ಶನಿವಾರ ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ವೇಳೆ ಊಟ ಮಾಡುವ ವಿಷಯಕ್ಕಾಗಿ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿದೆ. ಈ ಜಗಳ ತಾರಕಕ್ಕೇರಿ ಹ್ಯಾರಿಸ್ ಅವರ ಪುತ್ರ ಮಹಮ್ಮದ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದಾರೆ.
ಹಲ್ಲೆಗೊಳಗಾದ ವಿದ್ವತ್ ರನ್ನು ನಗರದ ಮಲ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಷ್ಟಕ್ಕೆ ಸುಮ್ಮನಾಗದ ಶಾಸಕರ ಪುತ್ರ ಮತ್ತು ಆತನ ಗ್ಯಾಂಗ್ ಆಸ್ಪತ್ರೆಗೆ ನುಗ್ಗಿ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿದ್ದ ವಿದ್ವತ್ ಸಹೋದರ ಸಾತ್ವಿಕ್ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಇದೀಗ ವಿದ್ವತ್ ಮಲ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ. ಈ ಸಂಬಂಧ ಮಹಮ್ಮದ್ ನಲಪಾಡ್ ಹ್ಯಾರಿಸ್ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಪ್ರಮುಖ ಆರೋಪಿಯಾಗಿರುವ ಶಾಸಕರ ಪುತ್ರ ಮಹಮ್ಮದ್ ನಲಪಾಡ್ ಪರಾರಿಯಾಗಿದ್ದಾನೆ.