ಬೆಂಗಳೂರು: ಹಿರೆಕೆರೂರಿನ ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಅವರು ಇಂದು ತನ್ನ ಒಂದು ತಿಂಗಳ ಸಂಬಳವಾದ 25 ಸಾವಿರ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬ ಶಾಸಕ ಹಾಗೂ ವಿಧಾನಪರಿಷತ್ ಸದಸ್ಯರು ತಮ್ಮ 1 ತಿಂಗಳ ಸಂಬಳವನ್ನು ಈ ರೈತರ ಸಾಲ ಮನ್ನಾ ಆಗಲು ಬಿಟ್ಟು ಕೊಡಬೇಕು ಅಂತ ಮನವಿ ಮಾಡಿಕೊಂಡರು.
ಇಂದು ನಾನು ನನ್ನ 1 ತಿಂಗಳ ಸಂಬಳ 25 ಸಾವಿರ ರೂ.ವನ್ನು ರೈತರ ಸಾಲ ಮನ್ನಾ ಮಾಡಿದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡುತ್ತಿದ್ದೇನೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಟ್ಟಲ್ಲಿ ರಾಜ್ಯದ ಅಭಿವೃದ್ಧಿ ಮುಂದೆ ಹೋಗುತ್ತೆ ಎನ್ನುವ ದೃಷ್ಟಿಯಿಂದ ಸರ್ಕಾರಿ ನೌಕರರು, ಶಾಸಕರು ಕೂಡ ತಮ್ಮ ಸಂಬಳವನ್ನು ಪರಿಹಾರ ನಿಧಿಗೆ ನೀಡಬೇಕು ಎಂದು ಈ ವೇಳೆ ವಿನಂತಿ ಮಾಡಿಕೊಂಡರು.
ಒಟ್ಟಿನಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಸಹಕಾರ ನೀಡುವ ಮೂಲಕ ಸರ್ಕಾರಿ ಅಧಿಕಾರಿಗಳು ಇದಕ್ಕೆ ತಮ್ಮ ತಿಂಗಳ ವೇತನ ನೀಡಲಿ ಅಂತ ಅವರು ತಿಳಿಸಿದ್ರು.