ಬೆಳಗಾವಿ: ನಗರದಲ್ಲಿ ಮರಾಠಿಗರ ಪರ ಹೋರಾಟ ಮಾಡಿ ಪಕ್ಷೇತರರ ಅಭ್ಯರ್ಥಿಯಾಗಿ ಖಾನಾಪುರ ಕ್ಷೇತ್ರದಿಂದ ನಿಂತು ಗೆದ್ದಿದ್ದ ಶಾಸಕ ಅರವಿಂದ್ ಪಾಟೀಲ್ ಅವರಿಗೆ ಈಗ ತನಿಖೆಯ ಬಿಸಿ ಕಾಣತೊಡಗಿದೆ.
ಮರಾಠ ಪರ ಹೋರಾಟಗಾರ ಅಂತ ಹೇಳಿಕೊಂಡು ಬೆಳಗಾವಿಯನ್ನು ಮಹರಾಷ್ಟ್ರಕ್ಕೆ ಸೇರಿಸಬೇಕು ಅಂತ ಹೋರಾಟ ಮಾಡಿ ಈ ಬಾರಿ ಎಂಇಎಸ್ನಿಂದ ಖಾನಾಪುರ ಕ್ಷೇತ್ರಕ್ಕೆ ಮತ್ತೆ ಸ್ಪರ್ದೆ ಮಾಡಲು ಮುಂದಾಗಿದ್ದ ಅರವಿಂದ್ ಪಾಟೀಲ್ಗೆ 2013 ಚುನಾವಣೆಯ ಸಂದರ್ಬದಲ್ಲಿ ಸಲ್ಲಿಸಿರೋ ಅಫಿಡವಿಟ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ತನ್ನ ಪತ್ನಿ ಸುಜಾತ ಯಾವುದೇ ನೌಕರಿಯಲ್ಲಿ ಇಲ್ಲ ಮತ್ತು ಯಾವುದೇ ರೀತಿಯ ಆದಾಯ ತೆರಿಗೆ ಕಟ್ಟುತ್ತಿಲ್ಲ ಅಂತ ಘೋಷಣೆ ಮಾಡಿದ್ರು. ಆದ್ರೆ ಅರವಿಂದ್ ಪಾಟೀಲ್ ಪತ್ನಿ ರಾಜ್ಯ ಸರ್ಕಾರಿ ನೌಕರರಾಗಿದ್ದು ಹುಕ್ಕೇರಿ ತಾಲೂಕಿನ ಹಿಟ್ನಾ ಗ್ರಾಮದಲ್ಲಿರೋ ಮರಾಠಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಆರ್ಟಿಐ ಕಾರ್ಯಕರ್ತರು ದೂರನ್ನು ನೀಡಿದ್ದು ಇದನ್ನು ಗಂಬೀರವಾಗಿ ಪರಿಗಣಿಸಿರೋ ಚುನವಣಾ ಆಯೋಗ ಬೆಳಗಾವಿ ಚುನಾವಣಾ ಅಧಿಕಾರಿಗೆ ಅರವಿಂದ್ ಪಾಟೀಲ್ ವಿರುದ್ದ ಸೂಕ್ತ ಕ್ರಮ ಕೈಗೋಳ್ಳುವಂತೆ ನಿರ್ದೇಶನ ನೀಡಿದೆ.
2007ರಿಂದ ಸುಜಾತ ಅವರು ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಮರಾಠಿಗರ ಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ದ ಶಾಸಕ ಅರವಿಂದ್ ಪಾಟೀಲ್ ಪತ್ನಿ ರಾಜ್ಯ ಸರ್ಕಾರಿ ಮರಾಠಿ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದನ್ನು ಮರೆಮಾಚಿದ್ದರು. ಪತ್ನಿ ಕರ್ನಾಟಕ ರಾಜ್ಯದಲ್ಲಿ ಶಿಕ್ಷಕಿ ಆಗಿರೋದು ಗೊತ್ತಾದ್ರೆ ತಾಲೂಕಿನ ಜನ ಮತ ಹಾಕೋದಿಲ್ಲ ಅನ್ನೋ ಆತಂಕದಿಂದ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.