ಬೆಳಗಾವಿ: ಜಿಲ್ಲೆಯ ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಕಾರು ಅಪಘಾತವಾಗಿರುವ ಘಟನೆ ಮಹಾರಾಷ್ಟ್ರದ ಸೊಲ್ಲಾಪುರ ಬಳಿ ನಡೆದಿದೆ.
ಘಟನೆಯಲ್ಲಿ ಶಾಸಕಿ ಅಂಜಲಿ ಅವರ ತಲೆಗೆ ಬಲವಾದ ಪೆಟ್ಟಾಗಿದ್ದು, ಮಹಾರಾಷ್ಟ್ರದ ಸೊಲ್ಲಾಪುರದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಘಟನೆಯಲ್ಲಿ ಶಾಸಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಪವಾಡ ರೀತಿಯಲ್ಲಿ ಅಪಘಾತದಿಂದ ಶಾಸಕಿ ಬಚಾವ್ ಆಗಿದ್ದಾರೆ ಎನ್ನಲಾಗಿದೆ.
ಮಹಾರಾಷ್ಟ್ರದ ಸೊಲ್ಲಾಪುದ ಗೆಸ್ಟ್ ಹೌಸ್ ಬಳಿ ಘಟನೆ ನಡೆದಿದ್ದು, ಸೊಲ್ಲಾಪುರದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ ದುರ್ಘಟನೆ ನಡೆದಿದೆ. ಕಾರಿನಲ್ಲಿದ್ದ ಚಾಲಕ ಸೇರಿ ಮತ್ತೊಬ್ಬರಿಗೂ ಗಂಭೀರ ಗಾಯಗಳಾಗಿದೆ. ಚಾಲಕ ಮಹಾದೇವ ಹಾಗೂ ಗುನಮಾನ್ ಸೈಯದ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗುವುದನ್ನು ತಪ್ಪಿಸಲು ಪ್ರಯತ್ನಿಸಿದ ಸಂದರ್ಭದಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ಕಾರು ಪಲ್ಟಿ ಆಗಿದೆ ಎನ್ನಲಾಗಿದೆ. ಕಾರಿನ ವೇಗದ ಕಾರಣ ಅಪಘಾತದ ಸಂದರ್ಭದಲ್ಲಿ ಮೂರು ಬಾರಿ ಪಲ್ಟಿಯಾಗಿದ್ದು, ಸಕಾಲಕ್ಕೆ ಏರ್ ಬ್ಯಾಗ್ ತೆರೆದುಕೊಂಡ ಪರಿಣಾಮ ಶಾಸಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಅಂಜಲಿ ನಿಂಬಾಳ್ಕರ್ ಅವರ ತಲೆಗೆ ಹಾಗು ಕೈಗೆ ಬಲವಾದ ಪೆಟ್ಟಗಿದೆ ಎಂಬ ಮಾಹಿತಿ ಲಭಿಸಿದೆ.