ಕೋಲ್ಕತ್ತಾ: ಜನರು ತಪ್ಪು ಮಾಡುತ್ತಾರೆ. ಆದರೆ ಅದನ್ನು ಸರಿಪಡಿಸಿಕೊಳ್ಳಬಹುದು ಎಂದು ಕಾಳಿ ದೇವಿ ಕುರಿತು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿವಾದಿತ ಹೇಳಿಕೆ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿದ್ದಾರೆ.
ಕೆಲಸ ಮಾಡುವಾಗ ನಾವು ತಪ್ಪುಗಳನ್ನು ಮಾಡುತ್ತೇವೆ. ಆದರೆ ಅವುಗಳನ್ನು ಸರಿಪಡಿಸಬಹುದು. ಕೆಲವರು ಒಳ್ಳೆ ಕೆಲಸವನ್ನೆಲ್ಲಾ ನೋಡದೇ ಇದ್ದಕ್ಕಿದ್ದ ಹಾಗೆ ಕೂಗಾಡ್ತಾರೆ. ನಕಾರಾತ್ಮಕತೆ ನಮ್ಮ ಮಿದುಳಿನ ಕೋಶಗಳ ಮೇಲೆ ಪರಿಣಾಮ ಬೀರುತ್ತೆ. ಹಾಗಾಗಿ ಪಾಸಿಟಿವ್ ಆಗಿ ಯೋಚಿಸೋಣ ಎಂದು ಟೀಕಾಕಾರರಿಗೆ ಮಮತಾ ಬ್ಯಾನರ್ಜಿ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ಧರ್ಮದ ಬಗ್ಗೆ ಮಾತನಾಡಲು ಸಾಧ್ಯವಿಲ್ಲದ ಭಾರತದಲ್ಲಿ ಬದುಕಲು ಬಯಸುವುದಿಲ್ಲ: ಮೆಹುವಾ
ವಿವಾದ ಏನು?
ಮಹುವಾ ಅವರು ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡುವಾಗ, ಕಾಳಿ ದೇವಿಯು ಮಾಂಸ ಸೇವಿಸುವ ಹಾಗೂ ಮದ್ಯ ಸ್ವೀಕರಿಸುವ ದೇವತೆಯಾಗಿದ್ದಾಳೆ. ನೀವು ಭೂತಾನ್ ಅಥವಾ ಸಿಕ್ಕಿಂಗೆ ಹೋದರೆ, ಅವರು ಪೂಜೆ ಮಾಡುವಾಗ ತಮ್ಮ ದೇವರಿಗೆ ವಿಸ್ಕಿಯನ್ನು ನೀಡುತ್ತಾರೆ. ಈಗ ನೀವು ಉತ್ತರ ಪ್ರದೇಶಕ್ಕೆ ಹೋಗಿ ನಿಮ್ಮ ದೇವರಿಗೆ ವಿಸ್ಕಿಯನ್ನು ಪ್ರಸಾದವಾಗಿ ಕೊಡುತ್ತೇವೆ ಎಂದು ಹೇಳಿದರೆ, ಅದು ಧರ್ಮನಿಂದನೆ ಎನ್ನುತ್ತಾರೆ ಎಂದು ಹೇಳಿಕೆ ನೀಡಿದ್ದರು.
ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಮಧ್ಯಪ್ರದೇಶದಲ್ಲಿ ಎಫ್ಐಆರ್ ದಾಖಲಾಗಿದೆ. ಇದನ್ನೂ ಓದಿ: ಕಾಳಿ ಕೈಯಲ್ಲಿ ಸಿಗರೇಟು ವಿವಾದ – ಹಿಂದೂಗಳ ಕ್ಷಮೆ ಕೋರಿದ ಟೊರೆಂಟೊ ಮ್ಯೂಸಿಯಂ