ಹಾಸನ: ಚಿನ್ನಾಭರಣ ಧರಿಸಿ ಮದುವೆಗೆ ಬಂದಿದ್ದ ಮಹಿಳೆ ನಿಗೂಢ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕುಣಿಗಲ್ನಲ್ಲಿ ಮಹಿಳೆ ಜೀವಂತವಾಗಿ ಪತ್ತೆಯಾಗಿದ್ದಾಳೆ.
ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಧರಿಸಿ ಬೇಲೂರು ತಾಲ್ಲೂಕು, ಮತ್ತಾವರ ಗ್ರಾಮದ ಪ್ರಿಯಾಂಕ (29) ಮದುವೆಗೆ ಆಗಮಿಸಿದ್ದಳು. ಬಳಿಕ ನಿಗೂಢವಾಗಿ ನಾಪತ್ತೆಯಾದಳು. ಮಹಿಳೆಯ ಬಟ್ಟೆ, ಬ್ಯಾಗ್, ಚಪ್ಪಲಿ ಹೆದ್ದಾರಿ ಪಕ್ಕದ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ಕೊಲೆ ಶಂಕೆ ವ್ಯಕ್ತಪಡಿಸಿದ್ದ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡದಿಂದ ಕೆರೆಯಲ್ಲಿ ಶೋಧ ನಡೆಸಲಾಯಿತು.
ಇಡೀ ದಿನ ಶೋಧ ನಡೆಸಿದರೂ ಕೆರೆಯಲ್ಲಿ ಮಹಿಳೆಯ ಗುರುತು ಪತ್ತೆಯಾಗಲಿಲ್ಲ. ಕೊಲೆ ಮಾಡಿ ಕೆರೆಯಲ್ಲಿ ಎಸೆಯಲಾಗಿದೆ ಎನ್ನುವ ಅನುಮಾನದಲ್ಲಿ ಶೋಧ ನಡೆಸಲಾಗಿತ್ತು.
ಪ್ರಕರಣ ಏನು?
ಗುರುವಾರ ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿನ, ಯಲಿಯೂರು ಗ್ರಾಮದಿಂದ ಚಿಕ್ಕಮಗಳೂರಿಗೆ ಪ್ರಿಯಾಂಕಾ ಮದುವೆಗೆ ಬಂದಿದ್ದಳು. ಮೈಮೇಲೆ ಸುಮಾರು 20 ಲಕ್ಷ ಮೌಲ್ಯದ ಒಡವೆ ಧರಿಸಿದ್ದ ಮಹಿಳೆ, ಮದುವೆ ಮುಗಿಸಿ ವಾಪಸ್ ಊರಿಗೆ ತೆರಳುವ ವೇಳೆ ನಿಗೂಢವಾಗಿ ನಾಪತ್ತೆಯಾಗಿದ್ದಳು.
ಮಹಿಳೆ ಮಿಸ್ಸಿಂಗ್ ಬಗ್ಗೆ ಕೇಸ್ ದಾಖಲಿಸಿ ಪೊಲೀಸರ ತನಿಖೆಗಿಳಿದಿದ್ದರು. ಉಡುಪಿಯಿಂದ ಆಗಮಿಸಿರುವ ತಜ್ಞರ ತಂಡದಿಂದ ಕೆರೆಯಲ್ಲಿ ಶೋಧ ನಡೆಸಲಾಗಿತ್ತು. ಆದರೆ, ಕೆರೆಯಲ್ಲಿ ಯಾವುದೇ ಗುರುತು ಸಿಗಲಿಲ್ಲ.

