ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವಿರುವ ನಾಮಫಲಕಕ್ಕೆ ಕಿಡಿಗೇಡಿಗಳು ಸೆಗಣಿ ಹೊಡೆದು, ಮಸಿ ಬಳಿದು ಅಪಮಾನ ಮಾಡಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಕೆ.ಮೇಗಲ್ ಗ್ರಾಮದ ಬಳಿ ನಡೆದಿದೆ.
ಎಸ್.ಕೆ.ಮೇಗಲ್ ಗ್ರಾಮದ ಸಮೀಪದ ಬಸ್ತಿಗದ್ದೆ ಬಳಿ ಕೇಂದ್ರ ಸರ್ಕಾರದ ಧೀನದಯಾಳ್ ಗ್ರಾಮ ಜ್ಯೋತಿ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಪ್ರಧಾನಿ ನರೇಂದ್ರ ಮೋದಿಯ ಭಾವಚಿತ್ರವಿರುವ ಫಲಕವನ್ನ ಹಾಕಲಾಗಿತ್ತು. ಈ ಫಲಕದಲ್ಲಿ ಇದ್ದ ನರೇಂದ್ರ ಮೋದಿ ಭಾವಚಿತ್ರಕ್ಕೆ ಕಿಡಿಗೇಡಿಗಳು ಸಗಣಿ ಹೊಡೆದು, ಮಸಿ ಬಳಿದು ವಿರೂಪಗೊಳಿಸಿದ್ದಾರೆ.
ಸಮಾಜದಲ್ಲಿ ಶಾಂತಿ ಕದಡುವ ಇಂತಹಾ ದುಷ್ಕೃತ್ಯವನ್ನ ಎಸಗಿದವರನ್ನ ಕೂಡಲೇ ಬಂಧಿಸಿ ಸೂಕ್ತ ಕ್ರಮಕೈಗೊಳ್ಳಿ ಎಂದು ಕಳಸ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ಒತ್ತಾಸಿದ್ದಾರೆ. ಈ ಬಗ್ಗೆ ಕುದುರೆಮುಖ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಮೈಸೂರಲ್ಲಿ ಗ್ಯಾಂಗ್ರೇಪ್ ನಡೆದು 4 ದಿನ – ಕಾಮುಕರ ಅರೆಸ್ಟ್ ಯಾವಾಗ?
ಪ್ರಧಾನ ಮಂತ್ರಿಗಳು ಕೈಗೊಳ್ಳುತ್ತಿರುವ ಜನಪರ ಯೋಜನೆಗಳನ್ನು ಸಹಿಸದ ಕೆಲ ಕಿಡಿಗೇಡಿಗಳು ಅವರಿಗೆ ಅವಮಾನ ಮಾಡುವ ಉದ್ದೇಶದಿಂದ ಈ ರೀತಿ ಕೃತ್ಯ ಎಸಗಿದ್ದಾರೆ. ಇದು ಪಕ್ಷದ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ. ಇಂತಹ ಘಟನೆಯಿಂದ ಸಮಾಜದಲ್ಲಿ ಶಾಂತಿ ಕದಡಿದಂತಾಗುತ್ತದೆ. ಹಾಗಾಗಿ ಪೊಲೀಸರು ಕೂಡಲೇ ಇಂತಹಾ ನೀಚ ಕೃತ್ಯವನ್ನ ಎಸಗಿದವರನ್ನ ಪತ್ತೆ ಹಚ್ಚಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.