ಮಂಗಳೂರು: ನಗರದ ಹಳೆ ಬಂದರು ಮೀನುಗಾರಿಕಾ ದಕ್ಕೆಯಲ್ಲಿ ಕಟ್ಟಿ ಹಾಕಿದ್ದ ಮೀನುಗಾರಿಕಾ ಬೋಟನ್ನು ರಾತ್ರೋರಾತ್ರಿ ಹಗ್ಗ ತುಂಡರಿಸಿ ಕಡಲಿಗೆ ಬಿಟ್ಟ ಘಟನೆ ನಡೆದಿದೆ.
ಖಾಲಿ ಬೋಟ್ ಈಗ ಸಮುದ್ರಕ್ಕೆ ತೇಲುತ್ತಾ ಹೋಗಿ ತೀರದಿಂದ ಸ್ವಲ್ಪ ದೂರದಲ್ಲಿ ಕಡಲ ಮಧ್ಯೆ ಬಂಡೆಗೆ ಸಿಲುಕಿ ಮುಳುಗಡೆಯಾಗಿದೆ. ಮಂಗಳೂರಿನ ಬಜಾಲ್ ನಿವಾಸಿ ಮೌರಿಸ್ ಎಂಬವರಿಗೆ ಸೇರಿದ ಬೋಟ್ ಇದಾಗಿದ್ದು ಯಾರೋ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆಂದು ಸಂಶಯಿಸಿದ್ದಾರೆ.
ಗಾಂಜಾ ವ್ಯಸನಿಗಳು ಈ ಕೃತ್ಯ ಎಸಗಿರಬೇಕೆಂದು ಮೀನುಗಾರರು ಶಂಕೆ ವ್ಯಕ್ತಪಡಿಸಿದ್ದಾರೆ. ಬೋಟಿಗೆ ಸಾಕಷ್ಟು ಹಾನಿಯಾಗಿದ್ದು, ಇತರೇ ಬೋಟ್ಗಳ ಸಹಾಯದಿಂದ ದಡಕ್ಕೆ ಎಳೆದು ತರುವ ಪ್ರಯತ್ನ ನಡೆಸಿದ್ದರೂ ಕಡಲಿನ ಅಲೆಗಳ ಅಬ್ಬರಕ್ಕೆ ಬೋಟ್ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಇದರಿಂದಾಗಿ ಬೋಟ್ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಬೋಟ್ನ ಹಗ್ಗ ತುಂಡರಿಸಿ ಬಿಟ್ಟ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವಂತೆ ಬೋಟ್ ಮಾಲೀಕರು ಬಂದರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.